ADVERTISEMENT

ಕಾನ್‌ಸ್ಟೆಬಲ್ ಮೇಲೆ ಹಲ್ಲೆಗೆ ಯತ್ನ: ಆರೋಪಿಯನ್ನು ಬೆನ್ನಟ್ಟಿ ಹಿಡಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 19:42 IST
Last Updated 6 ಮಾರ್ಚ್ 2020, 19:42 IST
ಅರ್ಬಜ್
ಅರ್ಬಜ್   

ಬೆಂಗಳೂರು: ಸಂಚಾರ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ ಆರೋಪಿಅರ್ಬಜ್ ಅಹ್ಮದ್ ಎಂಬಾತನನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿಯಲಾಗಿದೆ.

‘ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಅರ್ಬಜ್‌ನನ್ನು ಬಂಧಿಸಲಾಗಿದೆ. ಆತನ ಬಳಿ ಇದ್ದ ಡ್ರ್ಯಾಗರ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪುಲಿಕೇಶಿನಗರ ಸಂಚಾರ ಠಾಣೆ ಕಾನ್‌ಸ್ಟೆಬಲ್ ಮಂಜುನಾಥ್ ಬೈಕ್‌ನಲ್ಲಿ ಗಸ್ತು ತಿರುಗುತ್ತಿದ್ದರು. ಇದೇ ವೇಳೆ ಅರ್ಬಜ್, ಹೆಲ್ಮೆಟ್ ಧರಿಸದೇ ಬೈಕ್‌ನಲ್ಲಿ ಬಂದಿದ್ದ. ಮಂಜುನಾಥ್ ತಡೆಯಲು ಮುಂದಾದಾಗ ಆತ ತಪ್ಪಿಸಿಕೊಂಡು ಹೋಗಿದ್ದ. ಠಾಣೆಗೆ ಮಾಹಿತಿ ನೀಡಿದ್ದ ಕಾನ್‌ಸ್ಟೆಬಲ್ ಆತನನ್ನು ಬೆನ್ನಟ್ಟಿದ್ದರು.’

ADVERTISEMENT

‘ನೇತಾಜಿ ರಸ್ತೆ, ಪೌಟ್ರಿ ವೃತ್ತದ ಮೂಲಕ ಟ್ಯಾನರಿ ರಸ್ತೆಗೆ ಹೋಗಿದ್ದ ಆರೋಪಿ, ಗ್ಯಾರೇಜೊಂದರ ಬಳಿ ಬೈಕ್ ನಿಲ್ಲಿಸಿದ್ದ. ಅದನ್ನು ಗಮನಿಸಿದ ಪೊಲೀಸರು, ಆತನನ್ನು ಹಿಡಿಯಲು ಮುಂದಾಗಿದ್ದರು. ಅದೇ ವೇಳೆ ಆರೋಪಿ ಹಲ್ಲೆ ಮಾಡಿ ಓಡಲಾರಂಭಿಸಿದ್ದ. ನಂತರ, ಸಿಬ್ಬಂದಿ ಆತನನ್ನು ಬೆನ್ನಟ್ಟಿ ಹಿಡಿದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಡ್ರ್ಯಾಗರ್ ಇಟ್ಟುಕೊಂಡು ಓಡಾಡುತ್ತಿದ್ದ ಆರೋಪಿ, ಸುಲಿಗೆ ಹಾಗೂ ಕೊಲೆಗೆ ಯತ್ನ ಪ್ರಕರಣದಲ್ಲೂ ಭಾಗಿಯಾಗಿರುವ ಮಾಹಿತಿ ಇದೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.