
ಬೆಂಗಳೂರು: ಸ್ನೇಹಿತರೊಂದಿಗೆ ಲಾಡ್ಜ್ನಲ್ಲಿ ಪಾರ್ಟಿ ಮಾಡುವಾಗ ಪೊಲೀಸರು ಬಂದಿದ್ದರಿಂದ ಗಾಬರಿಗೊಂಡ ಯುವತಿ, ಬಾಲ್ಕನಿಯಿಂದ ಕೆಳಕ್ಕೆ ಜಿಗಿಯುವ ವೇಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಎಚ್ಎಎಲ್ ಠಾಣೆ ವ್ಯಾಪ್ತಿಯ ಕುಂದನಹಳ್ಳಿಯ ಎಇಸಿಎಸ್ ಲೇಔಟ್ ‘ಸಿ’ ಬ್ಲಾಕ್ನ ಬ್ರೂಕ್ ಫೀಲ್ಡ್ನಲ್ಲಿರುವ ಸೀ ಎಸ್ಟಾ ಲಾಡ್ಜ್ನಲ್ಲಿ ನಡೆದಿದೆ.
ಮಾರತ್ತಹಳ್ಳಿ ನಿವಾಸಿ ವೈಷ್ಣವಿ (21) ಗಂಭೀರವಾಗಿ ಗಾಯಗೊಂಡವರು. ಮಹಾನಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೈಷ್ಣವಿ ಅವರ ತಂದೆ ಆಂಥೋಣಿ ರಾಜ್ ಅವರು ದೂರು ನೀಡಿದ್ದು, ಸೀ ಎಸ್ಟಾ ಲಾಡ್ಜ್ ಮಾಲೀಕರು ಸೇರಿದಂತೆ ಇತರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 125(ಬಿ) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಗಾಯಾಳು ವೈಷ್ಣವಿ ಡಿ.14ರಂದು ತಡರಾತ್ರಿ 1 ಗಂಟೆ ಸುಮಾರಿಗೆ ಎಇಸಿಎಸ್ ಲೇಔಟ್ನಲ್ಲಿರುವ ಸೀ ಎಸ್ಟಾ ಲಾಡ್ಜ್ನಲ್ಲಿ ತನ್ನ 7 ಮಂದಿ ಸ್ನೇಹಿತರ ಜತೆ ಪಾರ್ಟಿ ಮಾಡಲು ತೆರಳಿದ್ದರು. ಈ ವೇಳೆ ಸಂಗೀತ ಹಾಕಿಕೊಂಡು ಡಾನ್ಸ್ ಮಾಡುತ್ತಿದ್ದರು. ಅದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಉಂಟಾಗಿತ್ತು. ಹೀಗಾಗಿ, ಸ್ಥಳೀಯರು ಪೊಲೀಸ್ ಸಹಾಯವಾಣಿ 112ಕ್ಕೆ ದೂರು ನೀಡಿದ್ದರು. ಎಚ್ಎಎಲ್ ಠಾಣೆ ಪೊಲೀಸರು ಮುಂಜಾನೆ 5ರ ಸುಮಾರಿಗೆ ಲಾಡ್ಜ್ಗೆ ಬಾಡಿವೋರ್ನ್ ಕ್ಯಾಮೆರಾ ಹಾಕಿಕೊಂಡು ತಪಾಸಣೆಗೆ ಹೋಗಿದ್ದರು. ಅದನ್ನು ಕಂಡ ವೈಷ್ಣವಿ ಭಯಗೊಂಡು ಲಾಡ್ಜ್ನ ಬಾಲ್ಕನಿಗೆ ಹೋಗಿ ಪೈಪ್ ಹಿಡಿದುಕೊಂಡು ಕೆಳಗೆ ಇಳಿಯಲು ಯತ್ನಿಸುತ್ತಿದ್ದರು. ಆಗ ನಿಯಂತ್ರಣ ತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ನೇಹಿತರು ಆಕೆಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನಾ ಸ್ಥಳದಲ್ಲಿದ್ದ ಪುತ್ರಿಯ ಸ್ನೇಹಿತರು, ಲಾಡ್ಜ್ ಸಿಬ್ಬಂದಿ ಹಾಗೂ ಸ್ಥಳಕ್ಕೆ ಬಂದ ಪೊಲೀಸರನ್ನು ವಿಚಾರಣೆ ನಡೆಸಿ ನ್ಯಾಯ ಕೊಡಿಸಬೇಕು ಎಂದು ಆಂಥೋಣಿ ರಾಜ್ ದೂರಿನಲ್ಲಿ ಕೋರಿದ್ದಾರೆ. ಈ ಸಂಬಂಧ ಎಎಚ್ಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರ ವಿರುದ್ಧ ಆರೋಪ – ತನಿಖೆ: ‘ಬಾಡಿವೋರ್ನ್ ಕ್ಯಾಮೆರಾ ಹಾಕಿಕೊಂಡು ಸ್ಥಳಕ್ಕೆ ಬಂದಿದ್ದ ಪೊಲೀಸರು ಹಣ ಕೇಳಿದರು. ಫೋನ್– ಪೇ ಮಾಡುವುದಾಗಿ ಹೇಳಿದಾಗ ನಗದು ರೂಪದಲ್ಲಿ ಹಣ ನೀಡಿ ಎಂದು ಬೇಡಿಕೆ ಇಟ್ಟಿದ್ದರು’ ಎಂಬ ಆರೋಪವಿದೆ.
ಪೊಲೀಸರ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಡಿಸಿಪಿ ಪರಶುರಾಮ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.