ಪೊಲೀಸ್ – ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರತ ಸಿಬ್ಬಂದಿ ಮಧ್ಯೆ ಗಲಾಟೆ ನಡೆದಿದ್ದು, ಅದೇ ಠಾಣೆಯಲ್ಲಿ ಹೆಡ್ ಕಾನ್ಸ್ಟೆಬಲ್ ಒಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಕಾನ್ಸ್ಟೆಬಲ್ ರೇಣುಕಾ ಅವರು ನೀಡಿದ ದೂರಿನ ಮೇರೆಗೆ ಹೆಡ್ ಕಾನ್ಸ್ಟೆಬಲ್ ಬಿ.ಜಿ.ಗೋವಿಂದರಾಜು ಅವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
‘ಜೂನ್ 10ರಂದು ರಾತ್ರಿ ಕಂಪ್ಯೂಟರ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಮನೆ ಬಿಟ್ಟು ಬಂದಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ನೋಡಿಕೊಳ್ಳುವಂತೆ, ಊಟ ನೀಡುವಂತೆ ಠಾಣೆಯ ಎಎಸ್ಐ ತಿಮ್ಮೇಗೌಡ ಸೂಚಿಸಿದ್ದರು. ರಾತ್ರಿ 2.30ರ ಸುಮಾರಿಗೆ ಆ ಮಕ್ಕಳನ್ನು ತನಿಖಾ ಸಹಾಯಕರ ಕೊಠಡಿಗೆ ಕರೆದೊಯ್ದು ಊಟ ಮಾಡಿಸುತ್ತಿದ್ದೆ. ಅದೇ ಸಮಯದಲ್ಲಿ ಬಿ.ಜಿ.ಗೋವಿಂದರಾಜು ಅವರು ಠಾಣೆಯ ಪ್ರವೇಶ ದ್ವಾರದ ಬಳಿ ಕುಳಿತು, ಹೆಣ್ಣು ಮಕ್ಕಳ ಕುರಿತು ಕೆಟ್ಟದಾಗಿ ಮಾತನಾಡುತ್ತಿದ್ದರು. ಅದನ್ನು ಕೇಳಿಸಿಕೊಂಡಿದ್ದ ಹೆಣ್ಣು ಮಕ್ಕಳು, ನನಗೆ ಮಾಹಿತಿ ನೀಡಿದ್ದರು. ಆಗ ಯಾಕೆ ಸರ್, ಹೆಣ್ಣು ಮಕ್ಕಳ ಕುರಿತು ಕೆಟ್ಟದಾಗಿ ಮಾತನಾಡುತ್ತಿದ್ದೀರಿ? ಇಲ್ಲಿ ಚಿಕ್ಕ ಮಕ್ಕಳು ಇದ್ದಾರೆ ಎಂದು ಪ್ರಶ್ನಿಸಿದ್ದೆ. ಆಗ ಗೋವಿಂದರಾಜು ಅವರು ನನ್ನನ್ನು ನಿಂದಿಸಿದರು’ ಎಂದು ರೇಣುಕಾ ನೀಡಿರುವ ದೂರು ಆಧರಿಸಿ ಎಫ್ಐಆರ್ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.
‘ಅವಾಚ್ಯ ಶಬ್ದದಿಂದ ನಿಂದಿಸಿ ಶೂ ಧರಿಸಿದ್ದ ಕಾಲಿನಿಂದ ಒದ್ದಿದ್ದಾರೆ. ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ತಿಮ್ಮೇಗೌಡ, ಬಸಪ್ಪ, ಮಹೇಶ್ ಅವರು ಬಿಡಿಸಲು ಬಂದಿದ್ದರು. ಆಗಲೂ ನಿಂದಿಸಿ ಶೂ ಧರಿಸಿದ್ದ ಕಾಲಿನಿಂದ ಮತ್ತೆ ಒದ್ದರು’ ಎಂಬುದಾಗಿ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.