ಬೆಂಗಳೂರು: 'ಡ್ರೋಣ್ ಪ್ರಾಜೆಕ್ಟ್ ಮಾಡುತ್ತಿರುವುದಾಗಿ ಹಲವರಿಂದ ಹಣ ಪಡೆದು ನಂಬಿಕೆ ದ್ರೋಹ ಎಸಗುತ್ತಿದ್ದಾರೆ ಎನ್ನಲಾಗುತ್ತಿರುವ ಡ್ರೋಣ್ಪ್ರತಾಪ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು' ಎಂದು ಆಗ್ರಹಿಸಿ ಜೇಕಬ್ ಜಾರ್ಜ್ ಎಂಬುವರು ನಗರ ಪೊಲೀಸ್ ಕಮಿಷನರ್ ಅವರಿಗೆ ದೂರು ಸಲ್ಲಿಸಿದ್ದಾರೆ.
'ಮಂಡ್ಯದ ಪ್ರತಾಪ್, 87 ದೇಶ ಸುತ್ತಿರುವುದಾಗಿ ಹಾಗೂ 300 ಉಪನ್ಯಾಸ ನೀಡಿರುವುದಾಗಿ ಸುಳ್ಳು ಹೇಳಿದ್ದಾನೆ. ವಿದೇಶದಲ್ಲಿ ನಡೆದ ಪ್ರದರ್ಶನದಲ್ಲೂ ಭಾಗವಹಿಸಿ ಚಿನ್ನದ ಪದಕ ಗೆದ್ದಿರುವುದಾಗಿ ಹೇಳುತ್ತಿದ್ದಾನೆ. ಇಂಥ ಸುಳ್ಳುಗಳನ್ನೇ ಮುಂದಿಟ್ಟುಕೊಂಡು ಹಲವು ಗಣ್ಯರು, ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಹಣ ಪಡೆದಿರುವ ಮಾಹಿತಿ ಇದೆ' ಎಂದು ದೂರಿನಲ್ಲಿ ಜಾರ್ಜ್ ಅವರು ಉಲ್ಲೇಖಿಸಿದ್ದಾರೆ.
'ಬೇರೆ ಬೇರೆ ಕಾಲೇಜಿಗೆ ಹೋಗಿ ವಿದ್ಯಾರ್ಥಿಗಳ ಎದುರು ಭಾಷಣ ಮಾಡಿ ತಪ್ಪು ಸಂದೇಶ ರವಾನಿಸಿದ್ದಾನೆ. ಸದ್ಯ ರಾಜ್ಯದಲ್ಲಿ ಸಾಕಷ್ಟು ವಿಜ್ಞಾನಿಗಳಿದ್ದಾರೆ. ಅವರೆಲ್ಲ ಹಗಲಿರುಳು ಶ್ರಮ ವಹಿಸುತ್ತಿದ್ದಾರೆ. ಪ್ರತಾಪ್ ತೆಗೆದುಕೊಂಡಿರುವ ಹಣವನ್ನು ವಸೂಲಿ ಮಾಡಿ, ನೈಜ ವಿಜ್ಞಾನಿಗಳಿಗೆ ಕೊಡಿಸಬೇಕು' ಎಂದೂ ಅವರು ಕೋರಿದ್ದಾರೆ.
ದೂರಿನ ಬಗ್ಗೆ ಪ್ರತಿಕ್ರಿಯೆ ಪಡೆಯಲು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಲಭ್ಯರಾಗಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.