ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣದ 12ನೇ ಆರೋಪಿ ಭರತ್ ಕುರ್ನೆಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರಿ ಎಸ್ಐಟಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ 3ನೇ ಎಸಿಎಂಎಂ ನ್ಯಾಯಾಲಯ, ಆದೇಶವನ್ನು ಸೋಮವಾರಕ್ಕೆ (ಆ.13) ಕಾಯ್ದಿರಿಸಿದೆ.
‘ಆರೋಪಿಗಳಿಗೆ ಆಶ್ರಯ ನೀಡಿದ್ದ ಭರತ್, ಅವರು ಶಸ್ತ್ರಾಸ್ತ್ರ ತರಬೇತಿ ಪಡೆಯಲು ತನ್ನ ಜಮೀನಿನಲ್ಲೇ ಜಾಗವನ್ನೂ ಕೊಟ್ಟಿದ್ದಾನೆ. ಅಮೋಲ್ ಕಾಳೆ ಮಾತ್ರವಲ್ಲದೆ, ಇನ್ನೂ ಪ್ರಮುಖ ಆರೋಪಿಗಳ ಜತೆ ಈತ ನಂಟು ಹೊಂದಿರುವ ಅನುಮಾನವಿದೆ. ಹೀಗಾಗಿ, ಹೆಚ್ಚಿನ ವಿಚಾರಣೆಗಾಗಿ 14 ದಿನ ಪೊಲೀಸ್ ಕಸ್ಟಡಿಗೆ ನೀಡಬೇಕು’ ಎಂದು ಎಸ್ಐಟಿ ಪರ ವಕೀಲರು ಮನವಿ ಮಾಡಿದರು.
ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆರೋಪಿಪರ ವಕೀಲ, ‘14 ದಿನಗಳವರೆಗೆ ವಶಕ್ಕೆ ಕೊಟ್ಟರೆ ಪೊಲೀಸರು ಆರೋಪಿಗೆ ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ಕೊಡುವ ಸಾಧ್ಯತೆ ಇದೆ. ಹಿಂದಿನ ಆರೋಪಿಗಳಿಗೂ ಅವರು ದೈಹಿಕ ಹಿಂಸೆ ನೀಡಿರುವುದು ಗೊತ್ತೇ ಇದೆ. ಹೀಗಾಗಿ, 2 ಅಥವಾ 3 ದಿನ ಮಾತ್ರ ಕಸ್ಟಡಿಗೆ ನೀಡುವುದು ಒಳ್ಳೆಯದು’ ಎಂದರು.
ವಾದ–ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಸೋಮವಾರ ಆದೇಶ ಪ್ರಕಟಿಸುವುದಾಗಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.