ADVERTISEMENT

ರೌಡಿ ಕಾಲಿಗೆ ಪೊಲೀಸರ ಗುಂಡೇಟು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 5:51 IST
Last Updated 17 ಆಗಸ್ಟ್ 2020, 5:51 IST

ಬೆಂಗಳೂರು: ಕೊಲೆಗೆ ಯತ್ನ, ಸುಲಿಗೆ ಹಾಗೂ ಅಪಹರಣ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡು ಓಡಾಡುತ್ತಿದ್ದ ರೌಡಿ ಅಜಯ್ ಅಲಿಯಾಸ್ ಮನು ಎಂಬಾತನನ್ನು ಕಾಲಿಗೆ ಗುಂಡು ಹಾರಿಸಿ ಪೊಲೀಸರು ಸೆರೆ ಹಿಡಿದಿದ್ದಾರೆ.

12ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಅಜಯ್, ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ. ಭಾನುವಾರ ಆತ ದೇವನಹಳ್ಳಿ ಬಳಿಯ ಕೋರಮಂಗಲ ಸಮೀಪದಲ್ಲಿದ್ದ, ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಚನ್ನರಾಯನಪಟ್ಟಣ ಠಾಣೆ ಪಿಎಸ್‌ಐ ನಂದೀಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದರು.

ಪೊಲೀಸರನ್ನು ನೋಡಿ ಪರಾರಿಯಾಗಲು ಯತ್ನಿಸಿದ್ದ ರೌಡಿ, ಕಾನ್‌ಸ್ಟೆಬಲ್ ನಾರಾಯಣಸ್ವಾಮಿ ಎಂಬುವರ ಮೇಲೆ ಹಲ್ಲೆ ನಡೆಸಿದ್ದ. ಕಾನ್‌ಸ್ಟೆಬಲ್ ರಕ್ಷಣೆಗೆ ಹೋದ ಪಿಎಸ್‌ಐ ನಂದೀಶ್, ಶರಣಾಗುವಂತೆ ರೌಡಿಗೆ ಎಚ್ಚರಿಕೆ ನೀಡಿದ್ದ. ಅದಕ್ಕೆ ಒಪ್ಪದ ರೌಡಿ, ಪಿಎಸ್‌ಐ ಮೇಲೆ ಹಲ್ಲೆಗೆ ಮುಂದಾಗಿದ್ದ. ಅದೇ ವೇಳೆಯೇ ಪಿಎಸ್ಐ, ರೌಡಿ ಕಾಲಿಗೆ ಗುಂಡು ಹೊಡೆದಿದ್ದರು. ಕುಸಿದು ಬಿದ್ದ ರೌಡಿಯನ್ನು ಪೊಲೀಸರೇ ದೇವನಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿವೈಎಸ್ಪಿ ರಂಗಪ್ಪ ಹಾಗೂ ಇನ್‌ಸ್ಪೆಕ್ಟರ್‌ ಮಲ್ಲಿಕಾರ್ಜುನ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.