ADVERTISEMENT

ರೆಡ್ಡಿ ಕೊಲೆ ಯತ್ನ ಪ್ರಕರಣ: ನಿರೀಕ್ಷಣಾ ಜಾಮೀನು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 19:19 IST
Last Updated 24 ಸೆಪ್ಟೆಂಬರ್ 2019, 19:19 IST

ಬೆಂಗಳೂರು: ‘ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡನೇ ಪತ್ನಿ ಪವಿತ್ರಾ ಕೊಲೆ ಮಾಡಲು ಯತ್ನಿಸಿದ್ದಾಳೆ’ ಎಂದು ಆರೋಪಿಸಿ ರಿಯಲ್ ಎಸ್ಟೇಟ್ ಉದ್ಯಮಿ ಆರ್. ಪ್ರಭಾಕರ ರೆಡ್ಡಿ ನೀಡಿದ ದೂರಿನ ತನಿಖೆ ನಡೆಯುತ್ತಿದೆ. ಪ್ರಕರಣದ ಸಂಬಂಧ ಪವಿತ್ರಾ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ’ ಎಂದು ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್ ಹೇಳಿದರು.

‘ಸೆ. 20ರಂದು ರೆಡ್ಡಿ ನೀಡಿರುವ ದೂರಿನ ಆಧಾರದಲ್ಲಿ ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಪವಿತ್ರಾ ಕೊಲೆ ಮಾಡಲು ಯತ್ನಿಸಿರುವುದಾಗಿ ದೂರಿನಲ್ಲಿ ಅವರು ಆರೋಪಿಸಿದ್ದಾರೆ. ಕಾರಿನಲ್ಲಿ ತೆರಳುವಾಗ ಕೊಲೆ ಯತ್ನ ನಡೆದಿದೆ ಎಂದೂ ದೂರಿನಲ್ಲಿದೆ’ ಎಂದು ಪಂತ್‌ ವಿವರಿಸಿದರು.

ಏನಿದು ದೂರು: ‘ಶುಕ್ರವಾರ (ಸೆ.20) ನೈಸ್‌ ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಹೋಗುತ್ತಿದ್ದಾಗ ಜೊತೆಗಿದ್ದ ಪವಿತ್ರ, ಕಾರಿನ ಸೀಟ್ ಬೆಲ್ಟ್‌ನಿಂದ ಕುತ್ತಿಗೆ ಬಿಗಿದು ಕೊಲೆಗೆ ಯತ್ನಿಸಿದ್ದಾಳೆ. ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಆರು ತಿಂಗಳಿನಿಂದ ಆಕೆ ಬೇಡಿಕೆ ಇಟ್ಟಿದ್ದಾಳೆ. ಅದಕ್ಕೆ ಒಪ್ಪದ ಕಾರಣ ಈ ಕೃತ್ಯಕ್ಕೆ ಮುಂದಾಗಿದ್ದಾಳೆ’ ಎಂದು ರೆಡ್ಡಿ ಆರೋಪಿಸಿದ್ದಾರೆ.

ADVERTISEMENT

‘ಪವಿತ್ರಾಳಿಂದ ತಪ್ಪಿಸಿಕೊಂಡು ಕಾರಿನಿಂದ ಇಳಿದಾಗ ಸ್ಟೀಲ್‌ ಬಾಟಲಿಯಿಂದ ಸಾಯಿಸುವ ಉದ್ದೇಶದಿಂದ ತಲೆಗೆ ಮತ್ತು ಬಲ ಕಿವಿಗೆ ಹೊಡೆದಿದ್ದಾಳೆ. ಆಸ್ತಿಯನ್ನು ಅವಳ ಹೆಸರಿಗೆ ಬರೆದುಕೊಡದಿದ್ದರೆ ರೌಡಿಗಳಿಂದ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾಳೆ’ ಎಂದೂ ದೂರಿನಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.