ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ನೂತನವಾಗಿ ಜಾರಿಗೆ ತಂದಿರುವ, ವಿದೇಶಿ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ಧನಸಹಾಯ ಮಾಡುವ ‘ಪ್ರಬುದ್ಧ’ ಯೋಜನೆಯಡಿ ಪ್ರಥಮ ಹಂತದಲ್ಲಿ ಏಳು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಈ ಯೋಜನೆಯಡಿ ವಿದೇಶಿ ವ್ಯಾಸಂಗ ಮಾಡಲಿರುವ ಇವರಿಗೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಗುರುವಾರ ಒಟ್ಟು ₹3.43 ಕೋಟಿ ಮೊತ್ತದ ಚೆಕ್ ಹಾಗೂ ಆಯ್ಕೆ ಪ್ರಮಾಣಪತ್ರ ವಿತರಿಸಿದರು.
ಉನ್ನತ ಶಿಕ್ಷಣಕ್ಕಾಗಿ ವಿದೇಶಿ ವಿಶ್ವವಿದ್ಯಾನಿಲಯಗಳಿಗೆ ತೆರಳುವ ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಯೋಜನೆ ಇದಾಗಿದೆ. ಎಂಜಿನಿಯರಿಂಗ್, ಮೂಲ ವಿಜ್ಞಾನ ಹಾಗೂ ಆನ್ವಯಿಕ ವಿಜ್ಞಾನ, ಕೃಷಿ ವಿಜ್ಞಾನ ಹಾಗೂ ವೈದ್ಯಕೀಯ (ಸ್ನಾತಕೋತ್ತರ), ಅಂತರರಾಷ್ಟ್ರೀಯ ವಾಣಿಜ್ಯ, ಅರ್ಥಶಾಸ್ತ್ರ ಹಾಗೂ ಲೆಕ್ಕಶಾಸ್ತ್ರ, ಮಾನವಶಾಸ್ತ್ರ, ಸಮಾಜ ವಿಜ್ಞಾನ, ಲಲಿತಕಲೆ ಮತ್ತು ಕಾನೂನು ವಿಷಯಗಳಲ್ಲಿ ವಿದೇಶ ಅಧ್ಯಯನ ಮಾಡುವವರಿಗೆ ಈ ವಿದ್ಯಾರ್ಥಿ ವೇತನ ಅನ್ವಯವಾಗುತ್ತದೆ. ಯೋಜನೆಯಡಿ ವಿದ್ಯಾರ್ಥಿಗಳ ವ್ಯಾಸಂಗ ಶುಲ್ಕ, ವಾಸದ ವೆಚ್ಚ ಹಾಗೂ ವಿಮಾನಯಾನ ವೆಚ್ಚಗಳನ್ನು ಸರ್ಕಾರದ ಕಡೆಯಿಂದ ಭರಿಸಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.