ಬೆಂಗಳೂರು: ಪಂಚಭೂತಗಳ (ಆಕಾಶ, ವಾಯು, ಜಲ, ಅಗ್ನಿ ಮತ್ತು ಭೂಮಿ) ಬಗ್ಗೆ ಜಾಗೃತಿ ಮೂಡಿಸಲು ರೋಟರಿ ಕ್ಲಬ್ ಲಾಲ್ಬಾಗ್ ವತಿಯಿಂದ ಇದೇ 22ರಿಂದ ಜೂನ್ 5ರವರೆಗೂ 45 ದಿನಗಳ 'ಪರಿಸರ ಉತ್ಸವ' ಆಯೋಜಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ರಂಗಕರ್ಮಿ ಪ್ರಕಾಶ್ ಬೆಳವಾಡಿ, ‘ಏಪ್ರಿಲ್ 22ರಂದು ಬೆಳಿಗ್ಗೆ 10ಗಂಟೆಗೆ ದೊಮ್ಮಲೂರಿನ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ಈ ಉತ್ಸವ ನಡೆಯಲಿದೆ. ನಟ ಮತ್ತು ಅವನಿ ರಾಯಭಾರಿ ಯಶ್ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಸಾಥ್ ನೀಡಲಿದ್ದಾರೆ’ ಎಂದರು.
‘ಉದ್ಘಾಟನೆಯ ದಿನ ಪರಿಸರ ವಿಷಯಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆಯಲಿವೆ. ಏಪ್ರಿಲ್ 23ರಿಂದ 28ರವರೆಗೆ ಕೆರೆಗಳ ಪುನಶ್ಚೇತನ ಹಾಗೂ ಭವಿಷ್ಯದ ಬೆಂಗಳೂರಿಗೆ ಬೇಕಾದ ಯೋಜನೆಗಳು ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿ ವಿಚಾರಸಂಕಿರಣಗಳು ನಡೆಯಲಿವೆ’ ಎಂದು ತಿಳಿಸಿದರು.
‘ಪರಿಸರದ ಕುರಿತು ಅರಿವು ಮೂಡಿಸುವ ನೃತ್ಯ ಮತ್ತು ಹಾಸ್ಯ ನಾಟಕ ಪ್ರದರ್ಶನ ಇರಲಿದೆ. ಮಕ್ಕಳ ಚಲನಚಿತ್ರೋತ್ಸವ, ಸಾಕ್ಷ್ಯ ಚಿತ್ರಗಳನ್ನು ತೋರಿಸಲಾಗುತ್ತದೆ. ವಿಪ್ರೊ ಸಂಸ್ಥೆಯ ಸಹಾಯದಿಂದ 4ಸಾವಿರ ಸಂಚಾರಿ ಪೊಲೀಸರಿಗೆ ಮುಖಗವಸು ವಿತರಿಸಲಿದ್ದೇವೆ’ ಎಂದು ವಿವರಿಸಿದರು.
‘27 ಕಲಾವಿದರುಪರಿಸರ ಉಳಿಸಲು ಸಂದೇಶ ಸಾರುವ ಕಲಾಕೃತಿಗಳನ್ನು ಪ್ರದರ್ಶಿಸಲಿದ್ದಾರೆ. ಈ ಪ್ರದರ್ಶನದಲ್ಲಿ ಮಾರಾಟವಾಗುವ ಕಲಾಕೃತಿಗಳಿಂದ ಬರುವ ಹಣವನ್ನು ಅವನಿ ಸಂಸ್ಥೆಯ ಪರಿಸರ ಸುಧಾರಣೆ ಯೋಜನೆಗಳಿಗೆ ಬಳಸಲಿದ್ದೇವೆ’ ಎಂದು ಹೇಳಿದರು.
‘ವಿಶ್ವ ಪರಿಸರ ದಿನದ ಜಾಗೃತಿ ಮೂಡಿಸಲು ಜೂನ್ 1ರಿಂದ 5ರವರೆಗೂ ಕ್ರಮವಾಗಿ ಲಾಲ್ಬಾಗ್, ಸ್ಯಾಂಕಿ ಕೆರೆ, ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ, ರಾಜಾಜಿನಗರ ಮತ್ತು ವಿಧಾನಸೌಧದಿಂದ ರಂಗೋಲಿ ಕೇಂದ್ರದವರೆಗೂ ಬೈಸಿಕಲ್ ಜಾಥಾಗಳು ನಡೆಯಲಿವೆ’ ಎಂದು ಬೆಳವಾಡಿ ಅವರು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.