ಬೆಂಗಳೂರು: ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶದಲ್ಲಿ ಹಾದುಹೋಗಲಿರುವ ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗಕ್ಕೆ ರಾಜ್ಯ ವನ್ಯಜೀವಿ ಮಂಡಳಿಯ ಒಪ್ಪಿಗೆ ಪಡೆಯಲು ಶತಾಯಗತಾಯ ಪ್ರಯತ್ನ ಮುಂದುವರಿದಿದೆ.
ಮಂಡಳಿಯು ಮಾರ್ಚ್ 9 ರಂದು ನಡೆಸಿದ್ದ 13ನೇ ಸಭೆಯಲ್ಲಿ ಬಹುತೇಕ ಸದಸ್ಯರು ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹಾಗಾಗಿ ಈ ಪ್ರಸ್ತಾವಕ್ಕೆ ಮಂಡಳಿ ಅನುಮೋದನೆ ನೀಡಿರಲಿಲ್ಲ. ಇದರ ಹೊರತಾಗಿಯೂ ಮತ್ತೆ ಈ ವಿಷಯ ಚರ್ಚಿಸಲು ಮಂಡಳಿ ಇದೇ 20ರಂದು ಸಭೆ ಕರೆದಿದೆ.
ಸದಸ್ಯರ ಒಮ್ಮತದ ತೀರ್ಮಾನವನ್ನು ಕಡೆಗಣಿಸಿ, ರಾಜಕಿಯ ಒತ್ತಡಕ್ಕೆ ಮಣಿದು ಮತ್ತೆ ಸಭೆ ಕರೆದಿರುವುದು ಮಂಡಳಿ ಸದಸ್ಯರ ಹಾಗೂ ವನ್ಯಜೀವಿ ಕಾರ್ಯಕರ್ತರ ಹುಬ್ಬೇರಿಸಿದೆ.
‘ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ನಾಶಪಡಿಸುವ ಮೂಲಕ ಮೇಲೇ ಪದೇ ಪದೇ ಆಘಾತ ನೀಡಲಾಗುತ್ತಿದೆ. ಎರಡು ವರ್ಷಗಳಲ್ಲಿ ಪಶ್ಚಿಮ ಘಟ್ಟ ಸಾಲಿನಲ್ಲಿ ಸಂಭವಿಸಿರುವ ಸರಣಿ ಭೂಕುಸಿತ, ಪ್ರವಾಹಗಳಿಂದಲೂ ಸರ್ಕಾರ ಪಾಠ ಕಲಿತಿಲ್ಲ. ಮತ್ತೆ ಲಕ್ಷಗಟ್ಟಲೆ ಕಾಡು ನಾಶಕ್ಕೆ ಕಾರಣವಾಗುವ ಈ ರೈಲು ಮಾರ್ಗವನ್ನು ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿರುವುದು ಎಷ್ಟು ಸರಿ’ ಎಂದು ವನ್ಯಜೀವಿ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.
ಐಐಎಸ್ಸಿ ವರದಿಗೂ ಖಂಡನೆ: ಉಪಶಮನ ಕ್ರಮಗಳನ್ನು ಕೈಗೊಂಡು ಯೋಜನೆಯನ್ನು ಜಾರಿಗೊಳಿಸಬಹುದೆಂಬ ಭಾರತೀಯ ವಿಜ್ಞಾನ ಸಂಸ್ಥೆಯ ಸಲಹೆಗಳಿಗೂ ಅವರು ಕಿಡಿಕಾರಿದ್ದಾರೆ.
‘ವನ್ಯಜೀವಿಗಳಿಗೆ ಮೇವಿನ ಮೀಸಲು ತಾಣ ನಿರ್ಮಾಣ, ಜಲಮೂಲಗಳ ನಿರ್ಮಾಣ, ಪಕ್ಷಿಗಳಿಗಾಗಿ ಆಹಾರ ಸಸ್ಯಗಳ ಬೆಳೆಸುವಿಕೆ, ರೈಲ್ವೆ ನಿಲ್ದಾಣಗಳಲ್ಲಿ ಹಾಗೂ ರೈಲ್ವೆಗಳಲ್ಲಿ ತ್ಯಾಜ್ಯ ನಿರ್ವಹಣೆ ಕುರಿತ ಸಲಹೆಗಳು ಹಾಸ್ಯಾಸ್ಪದ. ಆಹಾರ ಹಾಗೂನೀರಿನ ಮೂಲಗಳನ್ನು ಹುಡುಕುವುದು ಹೇಗೆಂದುವನ್ಯಜೀವಿಗಳಿಗೆ ಗೊತ್ತಿದೆ’ ಎಂದು ಗುರುಪ್ರಸಾದ್ ಟೀಕಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.