ಬೆಂಗಳೂರು: ‘ಕೋವಿಡ್ನಿಂದಾಗಿ ಜನರ ಬದುಕು ತತ್ತರಿಸಿದೆ. ಇಂತಹ ಪರಿಸ್ಥಿತಿಯಲ್ಲೇ ರಾಜ್ಯ ಸರ್ಕಾರ ವಿದ್ಯುತ್ ದರ ಏರಿಸಿ ನಾಗರಿಕರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಇದು ಅಮಾನವೀಯ ನಡೆ’ ಎಂದು ಆಮ್ ಆದ್ಮಿ ಪಕ್ಷದ ಬಿಬಿಎಂಪಿ ಉಸ್ತುವಾರಿ ಶಾಂತಲಾ ದಾಮ್ಲೆ ತಿಳಿಸಿದ್ದಾರೆ.
ಆನ್ಲೈನ್ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು‘ಲಾಕ್ಡೌನ್ನಿಂದಾಗಿ ಇದ್ದ ಕೆಲಸವೂ ಹೋಗಿದೆ. ಜೀವನ ನಿರ್ವಹಣೆಯೇ ಕಷ್ಟವಾಗಿದೆ. ತಿಂಗಳಿಗೆ200 ಯೂನಿಟ್ ವಿದ್ಯುತ್ ಬಳಸಿದರೆ₹1,260 ಬಿಲ್ ಕಟ್ಟಬೇಕು. ಈ ಹಣ ಹೊಂದಿಸುವುದು ಹೇಗೆ. ಸರ್ಕಾರ ಜನರನ್ನು ಲೂಟಿ ಮಾಡುತ್ತಿರುವುದು ಖಂಡನೀಯ’ ಎಂದಿದ್ದಾರೆ.
‘ರಾಜ್ಯ ಸರ್ಕಾರ200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಬೇಕು. ಆ ಮೂಲಕ ಜನರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಜನಾಂದೋಲನ ಹಮ್ಮಿಕೊಳ್ಳುತ್ತೇವೆ’ ಎಂದು ಎಚ್ಚರಿಸಿದರು.
ಪಕ್ಷದ ನೀತಿ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥ ಪ್ರಕಾಶ್ ನೆಡುಂಗಾಡಿ ‘ದೆಹಲಿ ಸರ್ಕಾರ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತಿದೆ. ತನ್ನಲ್ಲೇ ವಿದ್ಯುತ್ ಉತ್ಪಾದಿಸುವ ರಾಜ್ಯ ಸರ್ಕಾರ ದರ ಏರಿಸಿ ಜನತೆಯ ಮೇಲೆ ಬರೆ ಹಾಕುತ್ತಿದೆ. ಅದಾನಿ ಕಂಪನಿಯ ಬೊಕ್ಕಸ ತುಂಬಿಸಲು ಹೊರಟಿದೆ’ ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.