ಪ್ರಾಧಿನಿಧಿಕ ಚಿತ್ರ
ಐಸ್ಟಾಕ್ ಚಿತ್ರ
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಘಟನೆಯಲ್ಲಿ ಕೈದಿಯೊಬ್ಬನ ಕೈ ಮುರಿದಿದೆ.
ಹಲ್ಲೆ ನಡೆಸಿದ ಕೈದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಕಾರಾಗೃಹದ ಅಧೀಕ್ಷಕ ಇಮಾಮ್ ಸಾಬ್ ಮ್ಯಾಗೇರಿ ಅವರು ದೂರು ನೀಡಿದ್ದಾರೆ.
ಸಜಾ ಕೈದಿಗಳಾದ ಹರೀಶ್ ಅಲಿಯಾಸ್ ನಿರಾಣಿ, ಕುಮಾರಸ್ವಾಮಿ ಅಲಿಯಾಸ್ ಚೇತು, ಬಾಹುಬಲಿ ಸುಭಾಷ್ ವೀರಾಪುರ ಹಾಗೂ ಶಿವರಾಜ್ ಅಲಿಯಾಸ್ ಸುರೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ನಾಲ್ವರು ಕೈದಿಗಳು ಸೇರಿಕೊಂಡು ಸಜಾಬಂದಿ ಶಂಕರ್ ಎಂಬಾತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಹಲ್ಲೆಯಿಂದ ಶಂಕರ್ನ ಎಡಗೈ ಮುರಿದಿದೆ. ಮೂಗು ಹಾಗೂ ಬೆನ್ನಿನ ಭಾಗದಲ್ಲಿ ಗಾಯವಾಗಿದೆ. ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹಾಸಿಗೆ ಮೇಲೆ ಕುಳಿತಿದ್ದಕ್ಕೆ ಗಲಾಟೆ: ಕಾರಾಗೃಹದ ಸಜಾ ಬಂದಿಗಳ ವಿಭಾಗ ‘ಡಿ’ ಬ್ಯಾರಕ್ನ ಕೊಠಡಿ ಸಂಖ್ಯೆ 7ರಲ್ಲಿ ಶಂಕರ್ಗೆ ಸೇರಿದ ಹಾಸಿಗೆಯ ಮೇಲೆ ನಾಲ್ವರು ಕೈದಿಗಳು ಕುಳಿತಿದ್ದರು. ಇದನ್ನು ಗಮನಿಸಿದ ಶಂಕರ್, ಹಾಸಿಗೆ ಮೇಲಿಂದ ಏಳುವಂತೆ ಸೂಚಿಸಿದ್ದ. ಇದರಿಂದ ಸಿಟ್ಟಿಗೆದ್ದ ನಾಲ್ವರು ಆರೋಪಿಗಳು, ಶಂಕರ್ ಮೇಲೆ ಹಲ್ಲೆ ನಡೆಸಿದ್ದರು ಎಂದು ಗೊತ್ತಾಗಿದೆ.
ಇನ್ನೊಂದು ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿರುವ ಮಹಿಳೆ, ಕೊಠಡಿ ಬದಲಾವಣೆಗೆ ತೆರಳಿದ್ದ ವೀಕ್ಷಕಿಯ ಕೈಕಚ್ಚಿದ್ದಾಳೆ. ಕೈಕಚ್ಚಿದ್ದ ಕೈದಿ ನಜ್ಮಾ ವಿರುದ್ಧ ಪ್ರಕರಣ ದಾಖಲಾಗಿದೆ.
ಏಪ್ರಿಲ್ 17ರಂದು ನಜ್ಮಾಳನ್ನು ಒಂದು ಬ್ಯಾರಕ್ನಿಂದ ಮತ್ತೊಂದು ಬ್ಯಾರಕ್ಗೆ ಸ್ಥಳಾಂತರ ಮಾಡಲು ಜೈಲಿನ ವೀಕ್ಷಕಿ ಆರ್.ಎಚ್.ರೇಷ್ಮಾ ತೆರಳಿದ್ದರು. ಆಗ ನಜ್ಮಾ ಜಗಳ ತೆಗೆದು ರೇಷ್ಮಾ ಅವರು ಕೈಕಚ್ಚಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಎರಡು ಘಟನೆಗಳು ನಡೆದ ಬಳಿಕ ಇಮಾಮ್ ಸಾಬ್ ಮ್ಯಾಗೇರಿ ಅವರು ವಿಚಾರಣಾಧೀನ ಕೈದಿಗಳ ವಿಭಾಗದ ಮೇಲೆ ಅನಿರೀಕ್ಷಿತ ದಾಳಿ ನಡೆಸಿ ಪರಿಶೀಲಿಸಿದರು. ಆಗ ಎರಡು ಮೊಬೈಲ್ ಪತ್ತೆಯಾಗಿವೆ ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.