ADVERTISEMENT

‘ಸ್ವಾತಂತ್ರ್ಯವನ್ನು ಕಸಿಯುತ್ತಿದೆ ನವ ವಸಾಹತುಶಾಹಿತ್ವ’

ವಿಮರ್ಶಕ ಪ್ರೊ.ಸಿ.ಎನ್. ರಾಮಚಂದ್ರನ್ ಬೇಸರ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 19:56 IST
Last Updated 20 ಮಾರ್ಚ್ 2021, 19:56 IST
ಕಾರ್ಯಕ್ರಮದಲ್ಲಿ ಪ್ರೊ.ಸಿ.ಎನ್‌. ರಾಮಚಂದ್ರನ್‌ ಅವರಿಗೆ ‘ಶಿವರಾಮ ಕಾರಂತ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. (ಎಡದಿಂದ) ಡಾ.ಎಂ.ಎಸ್‌. ಆಶಾದೇವಿ, ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಜಯಪ್ರಕಾಶ್‌ ಮಾವಿನಕುಳಿ, ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷ ಡಾ.ಆರ್‌. ಲಕ್ಷ್ಮೀನಾರಾಯಣ, ಲೇಖಕಿ ಡಾ. ಲತಾಗುತ್ತಿ ಹಾಗೂ ಅನುವಾದಕ ಡಾ.ಎಚ್‌.ಎಸ್‌.ಎಂ. ಪ್ರಸಾದ್‌ ಇದ್ದರು. –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಪ್ರೊ.ಸಿ.ಎನ್‌. ರಾಮಚಂದ್ರನ್‌ ಅವರಿಗೆ ‘ಶಿವರಾಮ ಕಾರಂತ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. (ಎಡದಿಂದ) ಡಾ.ಎಂ.ಎಸ್‌. ಆಶಾದೇವಿ, ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಜಯಪ್ರಕಾಶ್‌ ಮಾವಿನಕುಳಿ, ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷ ಡಾ.ಆರ್‌. ಲಕ್ಷ್ಮೀನಾರಾಯಣ, ಲೇಖಕಿ ಡಾ. ಲತಾಗುತ್ತಿ ಹಾಗೂ ಅನುವಾದಕ ಡಾ.ಎಚ್‌.ಎಸ್‌.ಎಂ. ಪ್ರಸಾದ್‌ ಇದ್ದರು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸುದೀರ್ಘ ಹೋರಾಟದ ಬಳಿಕ ವಸಾಹತುಶಾಹಿಗಳಿಂದ ಸ್ವಾತಂತ್ರ್ಯವನ್ನು ಪಡೆದುಕೊಳ್ಳಲಾಯಿತು. ಆದರೆ, ಅದನ್ನು ಉಳಿಸಿಕೊಳ್ಳುವ ಬದಲು ನವ ವಸಾಹತುಶಾಹಿತ್ವದಲ್ಲಿ ಅದನ್ನು ಕಳೆದುಕೊಳ್ಳುತ್ತಿದ್ದೇವೆ’ ಎಂದು ವಿಮರ್ಶಕ ಪ್ರೊ.ಸಿ.ಎನ್. ರಾಮಚಂದ್ರನ್ ಬೇಸರ ವ್ಯಕ್ತಪಡಿಸಿದರು.

ಶಿವರಾ‍ಮ ಕಾರಂತ ಪ್ರತಿಷ್ಠಾನ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 2020ನೇ ಸಾಲಿನ ‘ಶಿವರಾಮ ಕಾರಂತ ಪ್ರಶಸ್ತಿ’ ಸ್ವೀಕರಿಸಿದರು. ಈ ಪ್ರಶಸ್ತಿಯು ₹ 20 ಸಾವಿರ ನಗದು ಬಹುಮಾನವನ್ನು ಒಳಗೊಂಡಿದೆ. ಇದೇ ವೇಳೆ ಡಾ.ಎಚ್‌.ಎಸ್.ಎಂ. ಪ್ರಕಾಶ್ ಅವರು ಇಂಗ್ಲಿಷ್‌ಗೆ ಅನುವಾದಿಸಿರುವ ‘ದಿ ಫ್ರೀಡಮ್’ ಕೃತಿಯನ್ನು (ಡಾ. ಲತಾಗುತ್ತಿ ಅವರ ‘ಕರಿ ನೀರು’ ಕಾದಂಬರಿ ಮೂಲ ಕೃತಿ) ಬಿಡುಗಡೆ ಮಾಡಿದರು.

‘ಸ್ವಾತಂತ್ರ್ಯ ಪಡೆದು ಆರೇಳು ದಶಕಗಳು ಕಳೆದರೂ ಅದರ ಮಹತ್ವವನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಪರಿಣಾಮ ನಮ್ಮಸ್ವಾತಂತ್ರ್ಯ ನವವಸಾಹತುಶಾಹಿಗಳ ಪಾಲಾಗುತ್ತಿದೆ. ಸ್ವಾತಂತ್ರ್ಯವನ್ನು ಗಳಿಸುವುದರ ಜತೆಗೆ ಅದನ್ನು ಉಳಿಸಿಕೊಳ್ಳುವುದೂ ಮುಖ್ಯ. ಕಾದಂಬರಿಯಲ್ಲೂ ಇದನ್ನೇ ಹೇಳಲಾಗಿದೆ’ ಎಂದರು.

ADVERTISEMENT

‘ಭಾರತೀಯ ಸಮಾಜದ ಆತ್ಮನಿರೀಕ್ಷೆಯಂತಿದ್ದ ಶಿವರಾಮ ಕಾರಂತರ ನಡೆ–ನುಡಿಯಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ. ಅವರು ಸಾಹಿತ್ಯದಲ್ಲಿ ಎತ್ತಿ ಹಿಡಿದ ಮೌಲ್ಯಗಳು ಬದುಕಿಗೆ ಕೂಡ ಸಂಬಂಧಿಸಿದ್ದಾಗಿದ್ದವು. ಅವರು ರೂಪಿಸಿದ ಮಾದರಿಯ ಹತ್ತಿರ ಹೋಗುವ ಪ್ರಯತ್ನ ಮಾಡುತ್ತಿದ್ದೇನೆ’ ಎಂದರು.

ವಿಮರ್ಶಕಿ ಡಾ.ಎಂ.ಎಸ್. ಆಶಾದೇವಿ, ‘ಸಿ.ಎನ್. ರಾಮಚಂದ್ರನ್ ಅವರು ಶಾಸ್ತ್ರ ಮತ್ತು ತತ್ವದ ತಳಹದಿಯಲ್ಲಿ ವಿಮರ್ಶೆಯನ್ನು ಪ್ರಾರಂಭಿಸಿದರು. ವಿಮರ್ಶೆಯಲ್ಲಿ ಆರೋಗ್ಯಪೂರ್ಣ ಮನಸ್ಸನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲು. ಅವರ ಆತ್ಮಕಥೆಯಲ್ಲಿ ಎಲ್ಲಿಯೂ ಆತ್ಮರಂಜನೆಯಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.