ಬೆಂಗಳೂರು: ‘ರಾಜ್ಯದಲ್ಲಿ ನೂತನ ಆಮ್ಲಜನಕ ಘಟಕಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಲು ಕೈಗಾರಿಕಾ ಇಲಾಖೆಯಿಂದ ಉತ್ತೇಜನ ಯೋಜನೆ ಜಾರಿಗೆ ತರಲು ಚಿಂತನೆ ನಡೆದಿದೆ’ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.
ರಾಜ್ಯದಲ್ಲಿನ ಆಮ್ಲಜನಕ ಉತ್ಪಾದನೆ ಹಾಗೂ ಸರಬರಾಜು ಕುರಿತಂತೆ ಹಿರಿಯ ಅಧಿಕಾರಿಗಳ ಜೊತೆ ಬುಧವಾರ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಆಮ್ಲಜನಕ ಉತ್ಪಾದನಾ ಘಟಕಗಳನ್ನು ಆರಂಭಿಸಲು ಮುಂದಾಗುವ ಉದ್ಯಮಿಗಳಿಗೆ ಆಕರ್ಷಕ ಉತ್ತೇಜನ ನೀಡಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೆಲವೇ ದಿನಗಳಲ್ಲಿ ಈ ಬಗ್ಗೆ ವಿವರ ನೀಡಲಾಗುವುದು’ ಎಂದರು.
‘ಕೇಂದ್ರದೊಂದಿಗೆ ನಡೆಸಿದ ಮಾತುಕತೆಯ ಪರಿಣಾಮ ರಾಜ್ಯಕ್ಕೆ ₹ 1,200 ಟನ್ ಆಮ್ಲಜನಕ ಹಂಚಿಕೆ ಮಾಡಲಾಗಿದೆ. ರಾಜ್ಯದಲ್ಲಿ ಉತ್ಪಾದನೆ ಆಗುವ ಆಮ್ಲಜನಕವನ್ನು ರಾಜ್ಯದಲ್ಲಿಯೇ ಬಳಸಿಕೊಳ್ಳಲು ಕೇಂದ್ರ ಅವಕಾಶ ನೀಡಿದೆ’ ಎಂದರು.
ಬಫರ್ ಸ್ಟಾಕ್ ಯೋಜನೆ: ‘ಜಿಲ್ಲೆಗಳಲ್ಲಿ ಆಮ್ಲಜನಕ ಬಫರ್ ಸ್ಟಾಕ್ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ಯೋಜನೆ ರೂಪಿಸುವಂತೆ ಸೂಚನೆ ನೀಡಲಾಗಿದೆ. ಪ್ರತಿ ಜಿಲ್ಲೆಗಳಲ್ಲಿ 20 ಟನ್ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲಾಗಿದೆ. ಕೇಂದ್ರ ಸಹಕಾರದಿಂದ 150 ಟನ್ ದ್ರವೀಕೃತ ಆಮ್ಲಜನಕ ಮಂಗಳೂರು ಬಂದರಿಗೆ ತಲುಪಿದೆ. ಕೇಂದ್ರದ ಸಹಕಾರದಿಂದ ರೈಲುಗಳಲ್ಲಿ ರವಾನೆಯಾಗುತ್ತಿರುವ ಆಮ್ಲಜನಕದಿಂದ ಆಮ್ಲಜನಕ ಪರಿಸ್ಥಿತಿ ಸುಧಾರಿಸುತ್ತಿದೆ’ ಎಂದರು.
ನಾಲ್ಕು ಟ್ಯಾಂಕರ್ಗಳ ರವಾನೆ: ‘ಒಡಿಶಾದ ಕಳಿಂಗಾ ನಗರದಿಂದ ನಾಲ್ಕು ಟ್ಯಾಂಕರ್ಗಳು ಬರುವ ನಿರೀಕ್ಷೆ ಇದೆ. ಯಾದಗಿರಿ ಮತ್ತು ಕೋಲಾರದಲ್ಲಿ 500 ದ್ರವೀಕೃತ ಆಮ್ಲಜನಕ ಜನರೇಟರ್ ಕಾರ್ಯಾರಂಭವಾಗಿದೆ. ಕಲಬುರ್ಗಿ ಇಎಸ್ಐ ಆಸ್ಪತ್ರೆಯಲ್ಲಿ ಇಂಥ 1,000 ಜನರೇಟರ್ ಪ್ಲಾಂಟ್ ಇದೇ 22ರಿಂದ ಕಾರ್ಯಾರಂಭ ಆಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.