ADVERTISEMENT

ಬೆಂಗಳೂರು | ನಕಲಿ ಸಹಿ ಮಾಡಿ ವಂಚನೆ: ಮೂವರ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 15:21 IST
Last Updated 15 ಡಿಸೆಂಬರ್ 2025, 15:21 IST
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ಅಪರಾಧಿಕ ಒಳಸಂಚು ರೂಪಿಸಿ ಸ್ಥಿರಾಸ್ತಿ ಖರೀದಿಸಿದಲ್ಲದೆ, ಚೆಕ್‌ಗಳ ಮೇಲೆ ನಕಲಿ ಸಹಿ ಮಾಡಿ ವಂಚಿಸಿರುವ ಆರೋಪದಡಿ ಮೂವರ ವಿರುದ್ಧ ಇಲ್ಲಿನ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊತ್ತನೂರು ನಿವಾಸಿ ತೇಜಸ್ವಿ ಮರಿಯಪ್ಪ ಅವರು ನೀಡಿದ ದೂರಿನ ಮೇರೆಗೆ ಅಕ್ರಮ್ಯಾಕ್ಸ್‌ ಪ್ರೈವೇಟ್‌ ಲಿಮಿಟೆಡ್‌ ನಿರ್ದೇಶಕ ರಜತ್ ವೆಂಕಟೇಶ್, ಸ್ನೇಹ ರಾಕೇಶ್, ಮಧ್ಯವರ್ತಿ ರಾಬಿನ್‌ ಫ್ರಾನ್ಸಿಸ್ ವಿರುದ್ಧ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಬನಶಂಕರಿಯ ಇಂಡಸ್ಟ್ರಿಯಲ್‌ ಲೇಔಟ್‌ನಲ್ಲಿ ದೂರುದಾರ ತೇಜಸ್ವಿ ಮರಿಯಪ್ಪ ಅವರು ಕಟ್ಟಡ ಹೊಂದಿದ್ದಾರೆ. ಆ ಕಟ್ಟಡವನ್ನು ರಾಬಿನ್ ಫ್ರಾನ್ಸಿಸ್‌ ಮೂಲಕ ರಜತ್ ವೆಂಕಟೇಶ್, ಸ್ನೇಹ ರಾಕೇಶ್‌ ಅವರಿಗೆ ₹17.50 ಕೋಟಿಗೆ 2022ರಲ್ಲಿ ಮಾರಾಟ ಮಾಡಿದ್ದರು. ಖಾಸಗಿ ಬ್ಯಾಂಕ್‌ನ ನಾಲ್ಕು ಚೆಕ್‌ಗಳನ್ನು ಆರೋಪಿಗಳು ನೀಡಿದ್ದರು. ಹೀಗಾಗಿ, ಶಾಂತಿನಗರದ ಉಪ ನೋಂದಾಣಾಧಿಕಾರಿಗಳ ಕಚೇರಿಯಲ್ಲಿ ಆಸ್ತಿ ಮಾರಾಟ ಕುರಿತು ಸೇಲ್ ಡೀಡ್ ಮಾಡಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

‘ಆರೋಪಿಗಳು ನೀಡಿದ್ದ ಚೆಕ್‌ಬೌನ್ಸ್ ಆಗಿತ್ತು. ಆಗ ಹಣ ನೀಡುವಂತೆ ಕೇಳಿದಾಗ ಆರೋಪಿಗಳು ವಿನಾಕಾರಣ ಮುಂದೂಡುತ್ತಾ ಹೋದರು. ಹಣ ಕೊಡುವಂತೆ ಮತ್ತೊಮ್ಮೆ ಪ್ರಶ್ನೆ ಮಾಡಿದಾಗ ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಕಟ್ಟಡ ಖರೀದಿಸಿ ವಂಚಿಸಿದ ಮೂವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ತೇಜಸ್ವಿ ಮರಿಯಪ್ಪ ಕೋರಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.