ಬೆಂಗಳೂರು: ನಗರದಲ್ಲಿ ತ್ಯಾಜ್ಯ ಸಂಗ್ರಹಕಾರರು, ಆಟೊ, ಟಿಪ್ಪರ್ ಚಾಲಕರಿಗೂ ನೇರವಾಗಿ ವೇತನ ಪಾವತಿಸಬೇಕು ಎಂದು ಆಗ್ರಹಿಸಿ ಬಿಬಿಎಂಪಿ ಪೌರ ಕಾರ್ಮಿಕರ ಟ್ರೇಡ್ ಯೂನಿಯನ್ಗಳ ಜಂಟಿ ಕ್ರಿಯಾ ಸಮಿತಿ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.
ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಐ.ಪಿ.ಡಿ. ಸಾಲಪ್ಪ ವರದಿ ಸಂಪೂರ್ಣ ಅನುಷ್ಠಾನಕ್ಕೂ ಒತ್ತಾಯಿಸಿದರು.
‘ನಗರಾಭಿವೃದ್ಧಿ ಇಲಾಖೆಯಿಂದ ನೇರ ಪಾವತಿಗೆ ಕ್ರಮ ಕೈಗೊಳ್ಳಲು ಬಿಬಿಎಂಪಿಯಿಂದ ಪ್ರಸ್ತಾವ ಕಳುಹಿಸಿಕೊಡಲು ಸೂಚಿಸಿದ್ದರೂ, ಪಾಲಿಕೆ ಅಧಿಕಾರಿಗಳು ಅದನ್ನು ಕಳುಹಿಸಿಲ್ಲ’ ಎಂದು ದೂರಿದರು.
‘ಬಿಬಿಎಂಪಿಯಲ್ಲಿ ಕಾಯಂ ಕಾರ್ಮಿಕರಲ್ಲದೆ, 10,561 ಕಸ ಸಂಗ್ರಹಕಾರರು ಮತ್ತು ಆಟೊ, ಟಿಪ್ಪರ್ ಚಾಲಕರಿಗೆ ನ್ಯಾಯ ಒದಗಿಸಬೇಕು. ಅವರನ್ನೂ ಕಾಯಂಗೊಳಿಸಬೇಕು. ಗುತ್ತಿಗೆದಾರರ ಲಾಬಿಗೆ ಪಾಲಿಕೆ ಅಧಿಕಾರಿಗಳು ಮಣಿದಿದ್ದು, ತಳಮಟ್ಟದ ಕೆಲಸಗಾರರಿಗೆ ನ್ಯಾಯ ದೊರೆಯಬೇಕು. ಬೇಡಿಕೆಗಳನ್ನು ಈಡೇರಿಸದಿದ್ದರೆ ಇನ್ನೊಂದು ವಾರದಲ್ಲಿ ಹೋರಾಟ ಮಾಡಲಾಗುತ್ತದೆ’ ಎಂದು ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಬಾಬು ಹೇಳಿದರು.
ಜಂಟಿ ಕ್ರಿಯಾ ಸಮಿತಿ ಗೌರವಾಧ್ಯಕ್ಷ ಸುಬ್ಬರಾಯುಡು, ಸಂಚಾಲಕರಾದ ಗಂಗಾಧರ್ ಸೋಮಘಟ್ಟ, ಭೀಮಜ್ಯೋತಿ ಶ್ರೀನಿವಾಸ್, ಶಂಕರಪ್ಪ, ರಾಜಶೇಖರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.