
ಪೀಣ್ಯ ದಾಸರಹಳ್ಳಿ: ‘ಜನ್ಮದಿನ ಹಾಗೂ ಹಬ್ಬಗಳಲ್ಲಿ ದುಂದುವೆಚ್ಚ ಮಾಡುವ ಬದಲಾಗಿ ಬಡ ಜನರಿಗೆ ನೆರವು ನೀಡುವ ಮೂಲಕ ಜೀವನದಲ್ಲಿ ಸಾರ್ಥಕತೆ ಮೆರೆಯಬೇಕು' ಎಂದು ಶಾಸಕ ಎಸ್.ಮುನಿರಾಜು ತಿಳಿಸಿದರು.
ಬಾಗಲಗುಂಟೆಯ ಶ್ರೀಸಾಯಿ ಕಲ್ಯಾಣ ಮಂಟಪದಲ್ಲಿ ತಮ್ಮ ಜನ್ಮದಿನದ ಪ್ರಯುಕ್ತ ಕಾರ್ಯಕರ್ತರು ಆಯೋಜಿಸಿದ್ದ 'ಅಭಿಮಾನೋತ್ಸವ' ಸಮಾರಂಭದಲ್ಲಿ ಅವರು ಮಾತನಾಡಿದರು.
‘ಜೀವಿತ ಅವಧಿಯಲ್ಲಿ ಸಮಾಜಕ್ಕೆ ನಾವು ನೀಡುವ ಕೊಡುಗೆ ಶಾಶ್ವತವಾಗಿ ಉಳಿಯಲಿದೆ. ಆದ್ದರಿಂದ, ಮೌಲ್ಯಯುತವಾಗಿ ಸೇವೆ ಮಾಡಿ' ಎಂದು ಮನವಿ ನೀಡಿದರು.
‘ಹಾರ ತುರಾಯಿ ಬದಲಿಗೆ ಸಾವಿರಾರು ಪುಸ್ತಕಗಳನ್ನು ಜನರು ಉಡುಗೊರೆಯಾಗಿ ನೀಡಿದ್ದಾರೆ. ಅವುಗಳನ್ನು ಕ್ಷೇತ್ರದ ಸರ್ಕಾರಿ ಶಾಲಾ– ಕಾಲೇಜುಗಳಿಗೆ ನೀಡುತ್ತೇನೆ' ಎಂದರು.
ಜನ್ಮದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಭರತ್ ಸೌಂದರ್ಯ ಅವರ ನೇತೃತ್ವದಲ್ಲಿ ಬಡವರಿಗೆ ತಳ್ಳುವ ಗಾಡಿಯನ್ನು ಮುನಿರಾಜು ವಿತರಿಸಿದರು.
ಇದೇ ವೇಳೆ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಫಲಾನುಭವಿಗಳಿಗೆ ಟ್ಯಾಕ್ಸಿಗಳನ್ನು ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.