ADVERTISEMENT

ಪಿಎಸ್‌ಐ ಅಡ್ಡಗಟ್ಟಿ ಸುಲಿಗೆ ಯತ್ನ; ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 19:31 IST
Last Updated 7 ಜುಲೈ 2021, 19:31 IST

ಬೆಂಗಳೂರು: ಸಬ್‌ ಇನ್‌ಸ್ಪೆಕ್ಟರ್‌ ಒಬ್ಬರ ಬೈಕ್ ಅಡ್ಡಗಟ್ಟಿ, ಸುಲಿಗೆಗೆ ಯತ್ನಿಸಿದ ಮೂರು ಮಂದಿ ಆರೋಪಿಗಳನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ.

ಪೀಣ್ಯದ ಬಾಲು, ಆಶಿತ್ ಗೌಡ ಹಾಗೂ ರವಿಕುಮಾರ್ ಬಂಧಿತರು.ಆರ್.ಟಿ.ನಗರ ಸಂಚಾರ ಪೊಲೀಸ್ ಠಾಣೆಯ ಪಿಎಸ್‍ಐ ಎಚ್‌.ಎಲ್.ಕೃಷ್ಣ ಅವರು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.

‘ಜುಲೈ 3ರ ರಾತ್ರಿ ಕರ್ತವ್ಯ ಮುಗಿಸಿ ಕೃಷ್ಣ ಅವರು ರಾಜಗೋಪಾಲನಗರ ಅಂಚೆ ಕಚೇರಿ ರಸ್ತೆ ಮಾರ್ಗದಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಮೂವರು ಆರೋಪಿಗಳು ಬೈಕ್‌ ಅಡ್ಡಗಟ್ಟಿದ್ದರು. ಚಾಕು ತೋರಿಸಿ ನಿನ್ನ ಬಳಿ ಇರುವುದನ್ನು ಕೊಡು ಎಂದು ಹೆದರಿಸಿದ್ದರು’.

ADVERTISEMENT

‘ಬಳಿಕ ಜೇಬಿನಲ್ಲಿದ್ದ ಮೊಬೈಲ್ ಕಸಿಯಲು ಯತ್ನಿಸಿದ್ದು, ಕೃಷ್ಣ ಅವರು ಧರಿಸಿದ್ದ ಪೊಲೀಸ್ ಚಿಹ್ನೆಯುಳ್ಳ ಹೆಲ್ಮೆಟ್‌ ಕಂಡು ಅಲ್ಲಿಂದ ಪರಾರಿಯಾದರು. ಈ ವೇಳೆ ಅವರು ಬಂದಿದ್ದ ಬೈಕ್ ಅಲ್ಲೇ ಬಿಟ್ಟು ಹೋಗಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಆರೋಪಿಯ ಬೈಕ್‌ನೊಂದಿಗೆರಾಜಗೋಪಾಲನಗರ ಠಾಣೆಗೆ ತೆರಳಿದ್ದ ಕೃಷ್ಣ, ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದರು. ಮೂವರೂ ಆರೋಪಿಗಳನ್ನು ಬಂಧಿಸಲಾಗಿದೆ’.

‘ಆರೋಪಿ ರವಿಕುಮಾರ್ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದ. ಉಳಿದವರು ಸಣ್ಣಪುಟ್ಟ ಕೆಲಸ ಮಾಡುತ್ತಿದ್ದರು. ಮೂವರೂ ಸ್ನೇಹಿತರಾಗಿದ್ದು, ಸುಲಭವಾಗಿ ಹಣ ಸಂಪಾದಿಸಿ, ಮೋಜು ಮಾಡಲು ಸುಲಿಗೆ ಮಾಡುತ್ತಿದ್ದರು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.