ADVERTISEMENT

₹ 33 ಲಕ್ಷ ಸಮೇತ ಕಸ್ಟೋಡಿಯನ್ ಪರಾರಿ

ಎಟಿಎಂ ಯಂತ್ರಗಳಿಗೆ ತುಂಬಬೇಕಿದ್ದ ನಗದು

​ಪ್ರಜಾವಾಣಿ ವಾರ್ತೆ
Published 12 ಮೇ 2019, 20:14 IST
Last Updated 12 ಮೇ 2019, 20:14 IST

ಬೆಂಗಳೂರು: ಎಟಿಎಂ ಯಂತ್ರಗಳಿಗೆ ತುಂಬಬೇಕಿದ್ದ ₹ 33 ಲಕ್ಷದ ಸಮೇತ‘ಸಿಎಂಎಸ್ ಇನ್ಫೊ ಸಿಸ್ಟಂ’ ಕಂಪನಿಯ ಕಸ್ಟೋಡಿಯನ್‌ ಪರಾರಿಯಾಗಿದ್ದಾರೆ.

ಪುಲಿಕೇಶಿನಗರ ಠಾಣೆಗೆ ದೂರು ನೀಡಿರುವ ಕಂಪನಿಯ ವ್ಯವಸ್ಥಾ‍ಪಕ ಶಾಂತಕುಮಾರ್, ‘ಮಾರನಕುಂಟೆ ಗ್ರಾಮದ ಅಜಯ್‌ಕುಮಾರ್‌, 2017ರಿಂದ ಕಂಪನಿಯಲ್ಲಿ ಕಸ್ಟೋಡಿಯನ್ ಆಗಿ ಕೆಲಸ ಮಾಡುತ್ತಿದ್ದರು. ಮೇ 8ರಂದು ₹ 33 ಲಕ್ಷ ಸಮೇತ ಪರಾರಿಯಾಗಿದ್ದಾರೆ’ ಎಂದು ತಿಳಿಸಿದ್ದಾರೆ.

‘ನಗರದಲ್ಲಿರುವ ಕೆಲ ಬ್ಯಾಂಕ್‌ಗಳ ಎಟಿಎಂ ಯಂತ್ರಗಳಿಗೆ ಹಣ ತುಂಬುವ ಜವಾಬ್ದಾರಿಯನ್ನು ಕಂಪನಿ ವಹಿಸಿಕೊಂಡಿದೆ. ಅದರಂತೆ, ಮೇ 8ರಂದು ಯಂತ್ರಗಳಿಗೆ ತುಂಬುವುದಕ್ಕಾಗಿ ಅಜಯ್‌ಕುಮಾರ್ ಅವರಿಗೆ ₹ 82 ಲಕ್ಷವನ್ನು ನೀಡಲಾಗಿತ್ತು.’

ADVERTISEMENT

‘ನೌಕರ ನಾಗೇಶ್‌ ಜೊತೆ ವಾಹನದಲ್ಲಿ ತೆರಳಿದ್ದ ಅಜಯ್‌, ದಾರಿ ಮಧ್ಯೆ ಮೂತ್ರ ವಿಸರ್ಜನೆಗೆಂದು ಹೋದವರು ವಾಪಸ್ ಬಂದಿಲ್ಲ. ಅವರ ಮೊಬೈಲ್ ಸಹ ಸ್ವಿಚ್ ಆಫ್ ಆಗಿತ್ತು’ ಎಂದು ಹೇಳಿದ್ದಾರೆ.

‘₹ 82 ಲಕ್ಷದ ಪೈಕಿ ₹ 38 ಲಕ್ಷವನ್ನು ಯಂತ್ರಗಳಿಗೆ ತುಂಬಲಾಗಿದೆ. ₹ 11 ಲಕ್ಷವನ್ನು ವಾಹನದಲ್ಲೇ ಬಿಟ್ಟು, ₹ 33 ಲಕ್ಷವನ್ನು ತೆಗೆದುಕೊಂಡು ಅಜಯ್‌ಕುಮಾರ್ ಪರಾರಿಯಾಗಿದ್ದಾರೆ. ಅವರನ್ನು ಹುಡುಕಿಕೊಡಿ’ ಎಂದು ಶಾಂತಕುಮಾರ್ ಕೋರಿದ್ದಾರೆ.

ಪೊಲೀಸರು, ‘ಹಣ ಸಿಕ್ಕ ಕೂಡಲೇ ಆರೋಪಿ ನಗರ ಬಿಟ್ಟು ಹೋಗಿರುವ ಮಾಹಿತಿ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.