ADVERTISEMENT

ಪಂಕ್ಚರ್ ಮಾಫಿಯಾ: 400 ಗ್ರಾಂ ಮೊಳೆ ಸಂಗ್ರಹಿಸಿದ ಪಿಎಸ್‌ಐ

​ಪ್ರಜಾವಾಣಿ ವಾರ್ತೆ
Published 30 ಮೇ 2023, 20:01 IST
Last Updated 30 ಮೇ 2023, 20:01 IST
ರಸ್ತೆಯಲ್ಲಿ ಸಿಕ್ಕ ಮೊಳೆ– ತಂತಿಗಳ ಜೊತೆ ಅಶೋಕನಗರ ಸಂಚಾರ ಠಾಣೆಯ ಪಿಎಸ್‌ಐ ಮಹಮ್ಮದ್ ಅಲಿ ಇಮ್ರಾನ್
ರಸ್ತೆಯಲ್ಲಿ ಸಿಕ್ಕ ಮೊಳೆ– ತಂತಿಗಳ ಜೊತೆ ಅಶೋಕನಗರ ಸಂಚಾರ ಠಾಣೆಯ ಪಿಎಸ್‌ಐ ಮಹಮ್ಮದ್ ಅಲಿ ಇಮ್ರಾನ್   

ಬೆಂಗಳೂರು: ನಗರದಲ್ಲಿ ಹೆಚ್ಚಾಗಿರುವ ಪಂಕ್ಚರ್ ಮಾಫಿಯಾ ಕೃತ್ಯ ಪತ್ತೆಗಾಗಿ ರಸ್ತೆಗೆ ಇಳಿದಿದ್ದ ಅಶೋಕನಗರ ಸಂಚಾರ ಠಾಣೆಯ ಪಿಎಸ್‌ಐ ಮಹಮ್ಮದ್ ಅಲಿ ಇಮ್ರಾನ್, ರಸ್ತೆಯಲ್ಲಿ ಎರಚಿದ್ದ 400 ಗ್ರಾಂ ಮೊಳೆ ಸಂಗ್ರಹಿಸಿದ್ದಾರೆ.

ರಸ್ತೆಯಲ್ಲಿ ಮೊಳೆ ಎಸೆದು ವಾಹನಗಳ ಚಕ್ರ ಪಂಕ್ಚರ್ ಮಾಡುವ ಜಾಲ ನಗರದಲ್ಲಿ ಸಕ್ರಿಯವಾಗಿದೆ. ಈ ಕೃತ್ಯದ ಬಗ್ಗೆ ‘ಪ್ರಜಾವಾಣಿ’ಯ ಮೇ 20ರ ಸಂಚಿಕೆಯಲ್ಲಿ ‘ಎಸೆತ: ‘ಪಂಕ್ಚರ್ ಮಾಫಿಯಾ’ ಸಕ್ರಿಯ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು.

ಇದನ್ನೂ ಓದಿ: ಮೊಳೆ ಎಸೆತ: ‘ಪಂಕ್ಚರ್ ಮಾಫಿಯಾ’ ಸಕ್ರಿಯ

ADVERTISEMENT

ಇದರ ಬೆನ್ನಲ್ಲೇ ಪಿಎಸ್‌ಐ ಮಹಮ್ಮದ್ ಅಲಿ ಇಮ್ರಾನ್, ಹೆಣ್ಣೂರು, ಎಚ್‌ಬಿಆರ್ ಬಡಾವಣೆ, ಆನೆಪಾಳ್ಯ, ನಂಜಪ್ಪ ವೃತ್ತ ಹಾಗೂ ಸುತ್ತಮುತ್ತ ರಸ್ತೆಗಳಲ್ಲಿ ಸುತ್ತಾಡಿ ಮೊಳೆಗಳನ್ನು ಪತ್ತೆ ಮಾಡಿದ್ದಾರೆ. ಜೊತಗೆ, ರಸ್ತೆಯ ಅಕ್ಕ–ಪಕ್ಕದಲ್ಲಿರುವ ಪಂಕ್ಚರ್ ತಿದ್ದುವ ಕೆಲ ಅಂಗಡಿಗಳ ಕೆಲಸಗಾರರಿಗೆ ಎಚ್ಚರಿಕೆ ನೀಡಿದ್ದಾರೆ.

‘ನನ್ನ ದ್ವಿಚಕ್ರ ವಾಹನದ ಚಕ್ರ ಮೂರು ಬಾರಿ ಪಂಕ್ಚರ್ ಆಗಿತ್ತು. ಪ್ರತಿ ಬಾರಿ ಪಂಕ್ಚರ್ ತಿದ್ದಿಸಿದಾಗಲೂ ಮೊಳೆ ಸಿಕ್ಕಿತ್ತು. ಹೀಗಾಗಿ, ದ್ವಿಚಕ್ರ ವಾಹನದಲ್ಲಿ ಓಡಾಡಿದ್ದ ರಸ್ತೆಯಲ್ಲಿ ಪರಿಶೀಲನೆ ನಡೆಸಿದೆ. ಅವಾಗಲೇ ಮೊಳೆ ಹಾಗೂ ತಂತಿಗಳು ಪತ್ತೆಯಾಗಿವೆ. ಪಂಕ್ಚರ್ ಅಂಗಡಿಯವರು ಗ್ರಾಹಕರು ತಮ್ಮತ್ತ ಬರುವಂತೆ ಮಾಡಲು ಎಸಗುತ್ತಿರುವ ಕೃತ್ಯವೋ ? ಅಥವಾ ಸಂಚಾರ ವ್ಯವಸ್ಥೆಗೆ ಅನನುಕೂಲ ಮಾಡುವ ಕೆಲಸವೋ ? ಎಂಬುದನ್ನು ದೇವರೇ ಬಲ್ಲ‘ ಎಂದು ಪಿಎಸ್‌ಐ ಮಹಮ್ಮದ್ ಅಲಿ ಇಮ್ರಾನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಇದನ್ನೂ ಓದಿ: ಮೊಳೆ ಮಾಫಿಯಾ ವಿರುದ್ಧ ಟೆಕಿ ಸೆಡ್ಡು

‘ನಮ್ಮ ಸಂಚಾರ ಪೊಲೀಸರು, ಮಳೆ–ಗಾಳಿ–ಚಳಿ ಎನ್ನದೇ ರಸ್ತೆಗಳಲ್ಲಿ ನಿಂತು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಆದರೆ, ಕೆಲವರು ರಸ್ತೆಯಲ್ಲಿ ಮೊಳೆ ಎಸೆದು ಸಂಚಾರಕ್ಕೆ ಹಾಗೂ ಜನರಿಗೆ ತೊಂದರೆಯನ್ನುಂಟು ಮಾಡುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.