ADVERTISEMENT

ಪುಟ್ಟೇನಹಳ್ಳಿ ಮೀಸಲು ಪಕ್ಷಿಧಾಮ ಪ್ರದೇಶ: ಬಿಬಿಎಂಪಿಗೆ ಹಸ್ತಾಂತರ ಆದೇಶ ರದ್ದು

ಪುಟ್ಟೇನಹಳ್ಳಿ ಮೀಸಲು ಪಕ್ಷಿಧಾಮ ಪ್ರದೇಶ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 21:04 IST
Last Updated 2 ಡಿಸೆಂಬರ್ 2021, 21:04 IST

ಬೆಂಗಳೂರು: ಯಲಹಂಕ ಸಮೀಪದ ಪುಟ್ಟೇನಹಳ್ಳಿ ಕೆರೆಯ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹಸ್ತಾಂತರಿಸಲು ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದೆ.

ಈ ಕುರಿತಂತೆ ಯಲಹಂಕ-ಪುಟ್ಟೇನಹಳ್ಳಿ ಕೆರೆ ಹಿತರಕ್ಷಣಾ ಸಮಿತಿ, ಬರ್ಡ್ ಕನ್ಸರವೇಷನ್ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿ ಈ ಆದೇಶ ನೀಡಿದೆ.

‘ಅರಣ್ಯ ಇಲಾಖೆಯೇ ಪಕ್ಷಿ ಸಂಕುಲದ ಪ್ರದೇಶವನ್ನು ನೋಡಿಕೊಳ್ಳಬೇಕು. ವಿವಾದಿತ ಪ್ರದೇಶದ ನಿಯಂತ್ರಣ, ನಿರ್ವಹಣೆ ಮಾಡುವ ಅಧಿಕಾರ ವನ್ಯಜೀವಿ ವಾರ್ಡನ್‌ಗೆ ಇದೆ. ಈ ಪ್ರದೇಶವನ್ನು ಬಿಬಿಎಂಪಿಗೆ ಹಸ್ತಾಂತರ ಮಾಡಿ ಸರ್ಕಾರ 2019ರ ನವೆಂಬರ್ 19ರಂದು ಹೊರಡಿಸಿರುವ ಆದೇಶ ನ್ಯಾಯೋಚಿತವಾಗಿಲ್ಲ’ ಎಂದು ಪೀಠ ಹೇಳಿದೆ.

ADVERTISEMENT

‘ಕೆರೆಗೆ ಯಾವುದೇ ರೀತಿಯ ಕಲುಷಿತ ನೀರು ಹರಿಯುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಈ ಮೊದಲು ಘೋಷಿಸಿದಂತೆ ಪಕ್ಷಿ ಸಂಕುಲ ಸಂರಕ್ಷಣೆಗೆ ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಲು, ಸರ್ಕಾರ ₹ 25 ಲಕ್ಷ ಬಿಡುಗಡೆ ಮಾಡಬೇಕು’ ಎಂದು ವಿವರಿಸಲಾಗಿದೆ.

‘ಪುಟ್ಟೇನಹಳ್ಳಿ ಕೆರೆಯನ್ನು ಮೀಸಲು ಪಕ್ಷಿಧಾಮವೆಂದು 2015ರ ಏಪ್ರಿಲ್‌ನಲ್ಲಿ ಘೋಷಿಸಲಾಗಿದೆ. ಆದರೆ, ಈ ಪ್ರದೇಶವನ್ನು ಕಾನೂನಿಗೆ ವಿರುದ್ಧವಾಗಿ ಬಿಬಿಎಂಪಿಗೆ ಹಸ್ತಾಂತರ ಮಾಡುವುದು ಸರಿಯಲ್ಲ’ ಎಂದು ಆಕ್ಷೇಪಿಸಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.