ADVERTISEMENT

ಹಣ ಕೊಟ್ಟರೆ ಕ್ವಾರಂಟೈನ್‌ ಇಲ್ಲ! ದೂರು ದಾಖಲು

ಉಪ್ಪಾರಪೇಟೆ ಪೊಲೀಸ್‌ ಠಾಣೆಗೆ ದೂರು ನೀಡಿದ ವೈದ್ಯ

​ಪ್ರಜಾವಾಣಿ ವಾರ್ತೆ
Published 23 ಮೇ 2020, 6:34 IST
Last Updated 23 ಮೇ 2020, 6:34 IST
ಹೋಂ ಕ್ವಾರಂಟೈನ್‌ಗೆ ಒಳಗಾಗಲು ವ್ಯಕ್ತಿಯೊಬ್ಬರ ಕೈ ಮೇಲೆ ಮುದ್ರೆ ಹಾಕಿರುವುದು
ಹೋಂ ಕ್ವಾರಂಟೈನ್‌ಗೆ ಒಳಗಾಗಲು ವ್ಯಕ್ತಿಯೊಬ್ಬರ ಕೈ ಮೇಲೆ ಮುದ್ರೆ ಹಾಕಿರುವುದು    

ಬೆಂಗಳೂರು: ಗಾಂಧಿನಗರದ ದೀವಾ ಹೊಟೇಲ್‌ನಲ್ಲಿ ಕ್ವಾರಂಟೈನ್‌ನಲ್ಲಿರುವ ಕೆಲವರಿಗೆ, ₹ 25 ಸಾವಿರ ಕೊಟ್ಟರೆ ವೈದ್ಯಕೀಯ ಪರೀಕ್ಷೆ ಬಳಿಕ (14 ದಿನಗಳಿಗೆ ಮುನ್ನ) ಮನೆಗೆ ಕಳಿಸುವ ಆಮಿಷವೊಡ್ಡಿದ ಪ್ರಕರಣ ಬಯಲಿಗೆ ಬಂದಿದೆ.

ಈ ಬಗ್ಗೆ ಉಪ್ಪಾರಪೇಟೆ ಪೊಲೀಸರಿಗೆವೈದ್ಯರಾದ ಬಿ.ವೈ. ನಂದಾದೂರು ನೀಡಿದ್ದಾರೆ. ಇದೇ 16ರಂದು ದೆಹಲಿಯಿಂದ ಬಂದಿರುವ 70
ಪ್ರಯಾಣಿಕರನ್ನು ಗಾಂಧಿನಗರದ ದೀವಾ ಹೊಟೇಲ್‌ನಲ್ಲಿ 14 ದಿನಗಳ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

18ರಂದು ಬೆಳಿಗ್ಗೆ 11ಕ್ಕೆ ಹೊಟೇಲ್‌ಗೆ ಅನಧಿಕೃತವಾಗಿ ಪ್ರವೇಶಿಸಿದ ಕೃಷ್ಣೇಗೌಡ ಎಂಬಾತ, ಬ್ರೀಜ್‌ರಾಣಿ, ಪಿ.ಎಸ್‌. ಜೈನ್‌ ಹಾಗೂ ಪ್ರೇಮ್‌ಕುಮಾರ್‌ ಅವರನ್ನು ಪರಿಚಯಿಸಿಕೊಂಡರು ಎನ್ನಲಾಗಿದೆ.

ADVERTISEMENT

ಕ್ವಾರಂಟೈನ್‌ಗಾಗಿ ಆಗುತ್ತಿರುವ ಖರ್ಚಿನ ಬಗ್ಗೆ ಕೇಳಿದರು. ದಿನಕ್ಕೆ ₹1400 ಬಾಡಿಗೆಯಂತೆ ₹19,600 ಪಾವತಿಸಬೇಕು. ವೈದ್ಯಕೀಯ ಪರೀಕ್ಷೆಗೆ ₹8 ಸಾವಿರ ಕೊಡಬೇಕು ಎಂದು ಅವರು ತಿಳಿಸಿದರು. ಕೃಷ್ಣೇಗೌಡ ತಮಗೆ ₹ 25ಸಾವಿರ ಕೊಟ್ಟರೆ ವೈದ್ಯಕೀಯ ಪರೀಕ್ಷೆ ಬಳಿಕ ಮನೆಗೆ ಕಳಿಸುವುದಾಗಿ ಆಮಿಷವೊಡ್ಡಿದರು ಎಂದು ನಂದಾ ದೂರಿನಲ್ಲಿ ತಿಳಿಸಿದ್ದಾರೆ.

ಕೃಷ್ಣೇಗೌಡರಿಗೆ ದುಡ್ಡು ಕೊಡುವ ಬದಲು ಕ್ವಾರಂಟೈನ್‌ ಮುಗಿಸಿಕೊಂಡೇ ಹೋಗುವುದು ಒಳ್ಳೆಯದು ಎಂಬ ತೀರ್ಮಾನಕ್ಕೆ ಅವರು ಬಂದರು. ಈ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ವೈದ್ಯರಿಂದ ಪೊಲೀಸರಿಗೆ ದೂರು ಕೊಡಿಸಿದ್ದಾರೆ. ತನಿಖೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.