ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಅಭ್ಯರ್ಥಿಗಳಿಗೆ ₹7 ಲಕ್ಷ ಪಡೆದುಕೊಂಡು ವಂಚಿಸಿದ ಆರೋಪದಡಿ ರಮ್ಯಾ ಹಾಗೂ ಅವರ ಪತಿ ಮಿಥುನ್ ವಿರುದ್ಧ ಕೆ.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ರಾಜೇಶ್ ಜಯಸಿಂಹ ಎಂಬುವರು ನೀಡಿದ್ದ ದೂರಿನನ್ವಯ ಆರೋಪಿಗಳಿಬ್ಬರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಅವರಿಬ್ಬರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸರು ಹೇಳಿದರು.
‘ಸ್ನೇಹಿತರೊಬ್ಬರ ಮೂಲಕ ರಾಜೇಶ್ ಅವರಿಗೆ ಎರಡು ವರ್ಷಗಳ ಹಿಂದೆ ಪರಿಚಯವಾಗಿದ್ದ ರಮ್ಯಾ, ‘ನಾನುರೈಲ್ವೆ ಇಲಾಖೆಯ ನೇಮಕಾತಿ ವಿಭಾಗದ ಅಧ್ಯಕ್ಷೆ. ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುವ ಅಧಿಕಾರ ನನಗಿದೆ’ ಎಂದಿದ್ದರು. ಪತಿ ಮಿಥುನ್, ‘ನನ್ನ ಪತ್ನಿ ಅಧ್ಯಕ್ಷೆ’ ಎಂದು ತಿಳಿಸಿದ್ದರು’ ಎಂದು ರಾಜೇಶ್ ದೂರಿನಲ್ಲಿ ಹೇಳಿದ್ದಾರೆ.
‘ನಿಮ್ಮ ಕಡೆ ಯುವಕರು ಇದ್ದರೆ ಹೇಳಿ, ಹಣ ಕೊಟ್ಟರೆ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇವೆ. ತಾತ್ಕಾಲಿಕವಾಗಿ 6 ತಿಂಗಳು ಕೆಲಸ ಮಾಡಬೇಕು. ನಂತರ ಕಾಯಂಗೊಳಿಸಲಾಗುತ್ತದೆ’ ಎಂದು ದಂಪತಿ ಹೇಳಿದ್ದರು. ಅದನ್ನು ನಂಬಿ ಐವರು ಅಭ್ಯರ್ಥಿಗಳಿಂದ ₹7 ಲಕ್ಷ ಕೊಡಿಸಿದ್ದೆ. ಆರೋಪಿಗಳು ಇದುವರೆಗೂ ಕೆಲಸ ಕೊಡಿಸಿಲ್ಲ. ಹಣವನ್ನು ವಾಪಸ್ ನೀಡಿಲ್ಲ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.