ಬೆಂಗಳೂರು: ₹20 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಸೂಟ್ಕೇಸ್ವೊಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಪತ್ತೆಯಾಗಿದ್ದು, ಅದನ್ನು ರೈಲ್ವೆ ಪೊಲೀಸರು ವಾರಸುದಾರರಿಗೆ ಒಪ್ಪಿಸಿದ್ದಾರೆ.
‘ನಗರದ ಹೊಂಗಸಂದ್ರ ನಿವಾಸಿಯಾಗಿರುವ ರಮೇಶ್ ಚಂದ್ ಎಂಬುವರು ಅಜ್ಮೇರ್ಗೆ ತೆರಳಲು ಮಂಗಳವಾರ ರಾತ್ರಿ 9.30ರ ಸುಮಾರಿಗೆ ಕುಟುಂಬ ಸಮೇತರಾಗಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು. ಬಟ್ಟೆ ಹಾಗೂ ಇತರೆ ಸಾಮಗ್ರಿಗಳು ತುಂಬಿದ್ದ 20 ಬ್ಯಾಗ್ಗಳನ್ನು ಜೊತೆಯಲ್ಲಿ ತಂದಿದ್ದರು. 350 ಗ್ರಾಂ ಚಿನ್ನಾಭರಣವಿದ್ದ ಸೂಟ್ಕೇಸ್ ಕೂಡ ಅವರ ಬಳಿ ಇತ್ತು. ಅದನ್ನು ಟಿಕೆಟ್ ಕೌಂಟರ್ ಬಳಿ ಮರೆತು ಹೋಗಿದ್ದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಎರಡು ಗಂಟೆಯ ನಂತರ ಸೂಟ್ಕೇಸ್ ಮರೆತಿರುವುದು ರಮೇಶ್ ಅವರ ಗಮನಕ್ಕೆ ಬಂದಿತ್ತು. ಅವರು ನಿಲ್ದಾಣದಲ್ಲೆಲ್ಲಾ ಹುಡುಕಾಡಿದ್ದರು. ಸಿಗದಿದ್ದಾಗ ಠಾಣೆಗೆ ಬಂದು ಮಾಹಿತಿ ನೀಡಿದ್ದರು. ಕರ್ತವ್ಯದಲ್ಲಿದ್ದ ಗೃಹ ರಕ್ಷಕ ದಳದ ಸಿಬ್ಬಂದಿ ಗುರುರಾಜ್ ಎಂಬುವರಿಗೆ ಸೂಟ್ಕೇಸ್ ಸಿಕ್ಕಿತ್ತು. ರಮೇಶ್ ಸಮ್ಮುಖದಲ್ಲೇ ಅದನ್ನು ತೆರೆದು ನೋಡಿದಾಗ ಚಿನ್ನಾಭರಣ ಪತ್ತೆಯಾಗಿತ್ತು. ಬಳಿಕ ಅದನ್ನು ಅವರಿಗೆ ಹಸ್ತಾಂತರಿಸಲಾಯಿತು’ ಎಂದು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.