ಬೆಂಗಳೂರು: ಭಾನುವಾರ ತಡರಾತ್ರಿ ಮತ್ತು ಸೋಮವಾರ ಮುಂಜಾನೆ ಸುರಿದ ಭಾರಿ ಮಳೆಯಿಂದಾಗಿ ಹೆಚ್ಎಸ್ಆರ್ ಬಡಾವಣೆ, ಬಂಡೇಪಾಳ್ಯ, ಮಂಗಮ್ಮನಪಾಳ್ಯದಲ್ಲಿ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ.
ಹೆಚ್ಎಸ್ಆರ್ ಬಡಾವಣೆಯ ಸೆಕ್ಟರ್ 6 ಮತ್ತು 7ರಲ್ಲಿ ಹಲವು ಮನೆಗಳ ಸೆಲ್ಲರ್ಗಳಿಗೆ ನೀರು ನುಗ್ಗಿದೆ. ಲಾರೆನ್ಸ್ ಶಾಲೆಯ ಹಿಂಭಾಗದಲ್ಲಿರುವ ಉದ್ಯಾನವು ಪೂರ್ತಿ ಜಲಾವೃತವಾಗಿದೆ. ಹಲವು ಪ್ರಮುಖ ರಸ್ತೆಗಳು ಮಳೆಯ ರಭಸಕ್ಕೆ ಕುಸಿದಿವೆ.
ಬಂಡೇಪಾಳ್ಯದ ಅಂಬೇಡ್ಕರ್ ನಗರ, ಮಂಗಮ್ಮನಪಾಳ್ಯದ ಮದೀನಾ ನಗರದಲ್ಲಿ ಹಲವು ಮನೆಗಳಿಗೆ ಕೊಳಚೆ ನೀರು ನುಗ್ಗಿದ್ದರಿಂದ ನಿವಾಸಿಗಳು ರಾತ್ರಿಯಿಡಿ ನೀರು ಹೊರಹಾಕುವಲ್ಲಿ ನಿರತರಾಗಿದ್ದರು. ಒಳಚರಂಡಿ ನೀರು ಮನೆಯ ಸಂಪ್ಗಳಿಗೆ ಸೇರಿದ್ದರಿಂದ, ಜನರು ಕುಡಿಯಲೂ ನೀರಿಲ್ಲದೇ ಪರದಾಡಿದರು.
ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಪ್ರವಾಹದ ರೀತಿಯಲ್ಲಿ ನೀರು ನಿಂತಿದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿತ್ತು. ಬಿಬಿಎಂಪಿ ಮತ್ತು ಅಗ್ನಿಶಾಮಕ ಸಿಬ್ಬಂದಿ ನೀರು ಹೊರಹಾಕಲು ಹರಸಾಹಸಪಟ್ಟರು.
‘ಹೆಚ್ಎಸ್ಆರ್ ಬಡಾವಣೆಯಲ್ಲಿ ಚರಂಡಿಗಳ ಹೂಳು ತೆಗೆದಿಲ್ಲ. ರಸ್ತೆಗಳಿಗೆ ಸರಿಯಾಗಿ ಡಾಂಬರೀಕರಣ ಸರಿಯಾಗಿಲ್ಲ. ಇದರಿಂದ ಮಳೆನೀರು ಸರಾಗವಾಗಿ ನೀರುಗಾಲುವೆಗೆ ಹರಿದು ಹೋಗದೇ ಮನೆಗಳಿಗೆ ನುಗ್ಗುತ್ತಿದೆ. ಮಳೆಗಾಲಕ್ಕೂ ಮುನ್ನವೇ ಚರಂಡಿಗಳ ಹೂಳು ತೆಗೆಯಬೇಕು. ಆದರೆ ಅಧಿಕಾರಿಗಳು ಕಾಲಹರಣ ಮಾಡಿದ್ದಾರೆ’ ಎಂದು ಹೆಚ್ಎಸ್ಆರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ವಾಸುದೇವರೆಡ್ಡಿ ಆರೋಪಿಸಿದರು.
‘ಮಂಗಮ್ಮನಪಾಳ್ಯದ ಮದಿನಾ ನಗರದ ವೆಂಕೋಜಿರಾವ್ ಖಾನೆ ಮತ್ತು ಪಾಪುಲರ್ ಕಾಲೊನಿ ವ್ಯಾಪ್ತಿಯಲ್ಲಿ ಒಳಚರಂಡಿ ಸೇರಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ’ ಎಂದು ನಿವಾಸಿ ಸಯ್ಯದ್ ನಜೀರ್ ದೂರಿದರು.
‘ಬಂಡೇಪಾಳ್ಯದಲ್ಲಿ ಒಳಚರಂಡಿ ನೀರು ಮನೆಗಳಿಗೆ ನುಗ್ಗಿದೆ. ಅಧಿಕಾರಿಗಳಿಗೆ ಕರೆ ಮಾಡಿದರೆ ‘ನಾವೆಲ್ಲಾ ಹೆಚ್ಎಸ್ಆರ್ ಲೇಔಟ್ನಲ್ಲಿದ್ದೇವೆ’ ಎನ್ನುತ್ತಿದ್ದಾರೆ. ಹಾಗಿದ್ದರೆ ನಾವು ಮನುಷ್ಯರಲ್ಲವೇ? ಇದುವರೆಗೂ ಒಬ್ಬ ಅಧಿಕಾರಿಯೂ ಇತ್ತ ತಿರುಗಿ ನೋಡಿಲ್ಲʼ ಎಂದು ಬಂಡೇಪಾಳ್ಯ ನಿವಾಸಿ ನೇತ್ರಾವತಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.