ರಾಜರಾಜೇಶ್ವರಿನಗರ: ‘ಪೀಣ್ಯ ಬಳಿ ಸರ್ಕಾರಿ ಜಾಗದಲ್ಲಿ 15ರಿಂದ 18 ವರ್ಷಗಳಿಂದ ಗುಡಿಸಲುಗಳಲ್ಲಿ ಜೀವನ ಸಾಗಿಸುತ್ತಿದ್ದ, 60ಕ್ಕೂ ಹೆಚ್ಚು ಕೂಲಿಕಾರ್ಮಿಕರ ಜೀವನವನ್ನು ಬೀದಿಪಾಲು ಮಾಡಿದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಗಡಿಪಾರು ಮಾಡಬೇಕು’ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ರಾಜ್ಯ ಆದಿಜಾಂಬವ ಸಂಘ, ಕರ್ನಾಟಕ ಅಂಬೇಡ್ಕರ್ ಸೇನೆ, ನಮ್ಮ ಕರ್ನಾಟಕ ಸೇನೆ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗುಡಿಸಲು ಕಳೆದುಕೊಂಡು ಬಡ ಕೂಲಿಕಾರ್ಮಿಕರು ಸತ್ಯಾಗ್ರಹ ನಡೆಸುತ್ತಿದ್ದಾರೆ.
ಮುಖಂಡ ಲಗ್ಗೆರೆ ನಾರಾಯಣಸ್ವಾಮಿ ಮಾತನಾಡಿ, ‘ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ಕಾರಿ ಜಾಗವನ್ನು ಕಬಳಿಸಲಾಗಿದೆ. ಬಡವರು, ಕೂಲಿಕಾರ್ಮಿಕರು, ವಸತಿ ರಹಿತರ ಸೇವೆ ಮಾಡಬೇಕಾದ ಶಾಸಕ ಮುನಿರತ್ನ, ತನ್ನ ದರ್ಪ, ದಬ್ಬಾಳಿಕೆಯಿಂದ ದಲಿತರನ್ನು ಬೀದಿಪಾಲು ಮಾಡಿದ್ದಾನೆ. ಒಕ್ಕಲಿಗ, ದಲಿತ ವಿರೋಧಿಯಾದ ಆತನನ್ನು ಗಡಿಪಾರು ಮಾಡುವರೆಗೂ, ಹೋರಾಟ ನಡೆಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
‘ಬಡವರ ಬದುಕನ್ನು ಬೀದಿ ಪಾಲು ಮಾಡಿರುವ ಶಾಸಕ ಮುನಿರತ್ನ ಅವರನ್ನು ಬಂಧಿಸಬೇಕು. ಮುಂದೆ ಬಡವರು, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಹಲ್ಲೆ ಮಾಡದಂತೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯ್ಕರ್ ಆಗ್ರಹಿಸಿದರು.
ಸುರಪುರ ಶಾಸಕ ರಾಜಾವೇಣು ಗೋಪಾಲನಾಯ್ಕ ನೆಲಸಮವಾಗಿರುವ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿ, ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದರು.
ಅಂಬೇಡ್ಕರ್ ರಾಜ್ಯ ಘಟಕದ ಮುಖಂಡ ಮದುರೆ ಅಂಬೇಡ್ಕರ್ ಸೇನೆ ರಾಜಾಧ್ಯಕ್ಷ ಪಿ.ಮೂರ್ತಿ, ಪಾಲಿಕೆ ಮಾಜಿ ಸದಸ್ಯರಾದ ಆಶಾ ಸುರೇಶ್, ಜಿ.ಮೋಹನ್ ಕುಮಾರ್, ಸಿದ್ದೇಗೌಡ, ಕಾಂಗ್ರೆಸ್ ಮುಖಂಡ ಯದೀಶ್ಠರರಾಮು, ಕೆಪಿಸಿಸಿ ಪ್ರಧಾನಕಾರ್ಯದರ್ಶಿ ವಿಠಲ್ ಯಾದವ್, ನಮ್ಮ ಕರ್ನಾಟಕ ಸೇನೆ ಬಸವರಾಜು ಪಡುಕೋಟಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.