ಬೆಂಗಳೂರು: ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ (ಆರ್ಐಎಂ) 24ನೇ ಘಟಿಕೋತ್ಸವ ಸಮಾರಂಭ ಗುರುವಾರ ನಡೆಯಿತು.
ಯುಜಿಸಿಯ ಶೈಕ್ಷಣಿಕ ಹಾಗೂ ಸಾಮಾಜಿಕ ಅಧ್ಯಯನ ಕೇಂದ್ರದ ಅಧ್ಯಕ್ಷ ಎಂ.ಕೆ.ಶ್ರೀಧರ್ ಅವರು ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಬಾರಿ ಒಟ್ಟು 227 ವಿದ್ಯಾರ್ಥಿಗಳಿಗೆ ಪದವಿ (ಸ್ನಾತಕೋತ್ತರ ಡಿಪ್ಲೊಮಾ) ಪ್ರದಾನ ಮಾಡಲಾಯಿತು.
ಶೈಕ್ಷಣಿಕ ಮತ್ತು ಸಹ ಪಠ್ಯ ಚಟುವಟಿಕೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕೆ.ಆರ್.ಕೀರ್ತನಾ ಅವರಿಗೆ ಚಿನ್ನದ ಪದಕ ನೀಡಲಾಯಿತು. ಅವರು ಅತ್ಯುತ್ತಮ ವಿದ್ಯಾರ್ಥಿನಿ (2018–20) ಗೌರವಕ್ಕೂ ಪಾತ್ರರಾದರು.
‘ನಾವು ಏನು ಮಾಡುತ್ತೀವಿ ಎನ್ನುವುದಕ್ಕಿಂತಲೂ ನಾವು ಏನನ್ನು ಕಲಿತಿದ್ದೀವಿ ಎಂಬುದು ಬಹಳ ಮುಖ್ಯ. ಜೀವನದಲ್ಲಿ ಸಾಕಷ್ಟು ಸವಾಲುಗಳು ಎದುರಾಗುತ್ತವೆ. ಅವುಗಳನ್ನು ಹಿಮ್ಮೆಟ್ಟಿಸಿ ಛಲದಿಂದ ಮುನ್ನುಗ್ಗುವ ಗುಣವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು’ ಎಂದು ಎಂ.ಕೆ.ಶ್ರೀಧರ್ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗೋಕುಲ ಎಜುಕೇಷನ್ ಫೌಂಡೇಷನ್ನ (ಜಿಇಎಫ್) ಮುಖ್ಯಸ್ಥ ಎಂ.ಆರ್.ಜಯರಾಮ್ ‘ಉತ್ತಮ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಬಹುದೊಡ್ಡದು. ಅದನ್ನು ಅರಿತು ಮುನ್ನಡೆಯಿರಿ’ ಎಂದು ಕಿವಿಮಾತು ಹೇಳಿದರು.
ಜಿಇಎಫ್ನ ನಿರ್ದೇಶಕ ಹಾಗೂ ಟ್ರಸ್ಟಿ ಎಂ.ಆರ್.ಆನಂದರಾಮ್, ಎಂಜಿನಿಯರಿಂಗ್ ಮತ್ತು ಜನರಲ್ ಸೈನ್ಸಸ್ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಬಿ.ಎಸ್.ರಾಮಪ್ರಸಾದ್, ಜಿಇಎಫ್ನ ಹಣಕಾಸು ವಿಭಾಗದ ಮುಖ್ಯಸ್ಥ ಜಿ.ರಾಮಚಂದ್ರ, ಆರ್ಐಎಂ ನಿರ್ದೇಶಕಿ (ಶೈಕ್ಷಣಿಕ) ಮಾನಸ ನಾಗಭೂಷಣಂ ಮತ್ತು ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ಸವಿತಾ ರಾಣಿ ರಾಮಚಂದ್ರನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.