ಕೆ.ಆರ್. ಪುರ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಂ ಮುಖಂಡರು ₹6 ಲಕ್ಷ ದೇಣಿಗೆ ನೀಡಿದ್ದಾರೆ.
ಬಸವನಪುರ ವಾರ್ಡ್ನಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹಾಗೂ ಬಿಜೆಪಿ ಮುಖಂಡ ಜಯಪ್ರಕಾಶ್ ನೇತೃತ್ವದಲ್ಲಿ ನಡೆದ ಶ್ರೀರಾಮ ಮಂದಿರ ನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ ಸುಮಾರು ₹50 ಲಕ್ಷ ದೇಣಿಗೆ ಸಂಗ್ರಹವಾಯಿತು.
‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಕೈಗೊಂಡಿರುವ ಅಯೋಧ್ಯೆಯ ಶ್ರೀರಾಮಮಂದಿರ ನಿಧಿ ಸಂಗ್ರಹ ಮಹಾ ಅಭಿಯಾನದಲ್ಲಿ ಕೆ.ಆರ್.ಪುರದ ಕ್ಷೇತ್ರದ ಎರಡು ವಾರ್ಡ್ನಿಂದ ಸುಮಾರು ₹1 ಕೋಟಿ ನಿಧಿ ಸಂಗ್ರಹವಾಗಿದೆ’ ಎಂದು ಬೈರತಿ ಬಸವರಾಜ್ ತಿಳಿಸಿದರು.
‘ಮುಸ್ಲಿಮರು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿರುವುದು ಸಂತಸದ ವಿಚಾರ. ಸೇವೆಗೆ ಧರ್ಮದ ಭೇದವಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ’ ಎಂದರು.
ಜಯಪ್ರಕಾಶ್ ₹5 ಲಕ್ಷ ಹಾಗೂ ಪಿ.ಜೆ.ಅಂತೋನಿಸ್ವಾಮಿ, ವೈಯಕ್ತಿಕವಾಗಿ ₹5 ಲಕ್ಷ ನೀಡಿದ್ದಾರೆ ಎಂದು ಹೇಳಿದರು.
‘ವಾರ್ಡ್ ಮಟ್ಟದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗುವುದು. ನಮ್ಮ ಕ್ಷೇತ್ರದಲ್ಲಿ ಹೆಚ್ಚಿನ ದೇಣಿಗೆ ಸಂಗ್ರಹಿಸಲಾಗುವುದು. ಸಂಘ ಪರಿವಾರದವರು ಮನೆ ಮನೆ ಅಭಿಯಾನದಲ್ಲಿ ದೇಣಿಗೆ ಸಂಗ್ರಹಿಸುತ್ತಿದ್ದು, ಪ್ರತಿಯೊಬ್ಬರೂ ದೇಣಿಗೆ ನೀಡುವ ಮೂಲಕ ರಾಮಮಂದಿರ ನಿರ್ಮಾಣಕ್ಕೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.
ಬಿಜೆಪಿ ನಗರ ಜಿಲ್ಲಾ ಉಪಾಧ್ಯಕ್ಷ ಮುನೇಗೌಡ, ಮುಖಂಡರಾದ, ಡಿ.ಕೆ.ದೇವೇಂದ್ರ, ರವಿಕುಮಾರ್, ಮೇಡಹಳ್ಳಿ ಜಗದೀಶ್, ಶ್ರೀರಾಮ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.