ಬೆಂಗಳೂರು: ಶ್ರೀ ರಾಮಸೇವಾ ಮಂಡಲಿಯು ಏಪ್ರಿಲ್ 6ರಿಂದ ಮೇ 6ರ ವರೆಗೆ ಆಯೋಜಿಸಿರುವ ‘81ನೇ ಶ್ರೀರಾಮನವಮಿ ಅಂತರರಾಷ್ಟ್ರೀಯ ಸಂಗೀತೋತ್ಸವ–2019’ಕ್ಕೆ ವೇದಿಕೆ ಮತ್ತು ತಾತ್ಕಾಲಿಕ ಸಭಾಂಗಣ ನಿರ್ಮಾಣಕ್ಕೆ ಚಾಮರಾಜಪೇಟೆಯ ಹಳೆಕೋಟೆ ಹೈಸ್ಕೂಲ್ ಮೈದಾನದಲ್ಲಿ ಇದೇ ಗುರುವಾರ ಗುದ್ದಲಿ ಪೂಜೆ ಆಯೋಜಿಸಲಾಗಿದೆ. ಬೆಳಿಗ್ಗೆ 8.45ರಿಂದ 9.30ರ ವರೆಗೆ ಪೂಜೆ ನೆರವೇರಲಿದೆ. ಈ ವೇಳೆ ಲಕ್ಷಣ ಮತ್ತು ತಂಡದವರು ನಾದಸ್ವರ ವಾದನ ಪ್ರಸ್ತುತಪಡಿಸಲಿದ್ದಾರೆ.
ಕೆಎಸ್ಆರ್ಪಿ ಎಡಿಜಿಪಿ ಭಾಸ್ಕರ್ ರಾವ್, ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್ ನಿರ್ದೇಶಕರಾದಕೆ.ಎನ್.ಶಾಂತಕುಮಾರ್, ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಕೆ.ಅಣ್ಣಾಮಲೈ, ಥೀಮ್ ವರ್ಕ್ಸ್ ಅನಲಿಟಿಕ್ಸ್ ಸ್ಥಾಪಕ ಪಿ.ಬಾಲಸುಬ್ರಹ್ಮಣಿಯನ್ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಈ ಬಾರಿಯ ಸಂಗೀತೋತ್ಸವದಲ್ಲಿಯೂ ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತದ ಜುಗಲ್ ಬಂದಿ ಕಾರ್ಯಕ್ರಮ, ಯುವ ಸಂಗೀತ ಉತ್ಸವವೂ ಇರಲಿವೆ. ಮೈಸೂರು ನಾಗರಾಜ್ ಮತ್ತು ಮೈಸೂರು ಮಂಜುನಾಥ್, ಟಿ.ವಿ.ಶಂಕರನಾರಾಯಣ, ಅಭಿಷೇಕ್ ರಘುರಾಂ, ಎಂ.ಎಸ್.ಶೀಲಾ, ಹೈದರಾಬಾದ್ ಸಹೋದರರು, ಕದ್ರಿ ಗೋಪಾಲನಾಥ್, ಬಾಂಬೆ ಜಯಶ್ರೀ ರಾಮನಾಥ್ ಅವರು ಸಂಗೀತ ಸುಧೆಯನ್ನು ಹರಿಸಲಿದ್ದಾರೆ. ‘ಪ್ರಜಾವಾಣಿ’ ಉತ್ಸವದ ಸಹಭಾಗಿತ್ವ ವಹಿಸಿಕೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.