ADVERTISEMENT

ರಂಗಶಂಕರ: ನಾಟಕ ಪ್ರದರ್ಶನ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 21:41 IST
Last Updated 8 ಜನವರಿ 2021, 21:41 IST
ರಂಗಶಂಕರ
ರಂಗಶಂಕರ   

ಬೆಂಗಳೂರು: ಕೋವಿಡ್‌ ಕಾರಣ ಕೆಲ ತಿಂಗಳಿಂದ ಸ್ಥಗಿತವಾಗಿದ್ದ ಜೆ.ಪಿ. ನಗರದಲ್ಲಿರುವ ರಂಗಶಂಕರ ಶುಕ್ರವಾರದಿಂದ ಪುನರಾರಂಭವಾಗಿದೆ.

ಸ್ಪಂದನಾ ರಂಗ ತಂಡದ ‘ಕರಿಮಾಯಿ’ ನಾಟಕವು ಕೋವಿಡ್‌ ಬಳಿಕಅಲ್ಲಿ ಪ್ರದರ್ಶನ ಕಂಡ ಮೊದಲ ನಾಟಕವಾಗಿದೆ. ಕೋವಿಡ್ ಕಾರಣ 300 ಆಸನಗಳ ಸಂಖ್ಯೆಯನ್ನು140ಕ್ಕೆ ಇಳಿಕೆ ಮಾಡಲಾಗಿದೆ. ಆಸನಗಳ ನಡುವೆ ಅಂತರ ಕಾಯ್ದುಕೊಳ್ಳಲಾಗಿದ್ದು, ನಾಟಕ ವೀಕ್ಷಣೆಗೆ ಬಂದ ಪ್ರೇಕ್ಷಕರಿಗೆ ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆ ನಡೆಸಲಾಗುತ್ತಿದೆ. ಮೊದಲ ಪ್ರದರ್ಶನ ಹೌಸ್‌ಫುಲ್ ಕಂಡಿದ್ದು, ಈ ತಿಂಗಳು ಪೂರ್ತಿ ನಾಟಕಗಳು ಬುಕ್ಕಿಂಗ್ ಆಗಿವೆ. ಆಸನಗಳ ಸಂಖ್ಯೆಯನ್ನು ಕಡಿತ ಮಾಡಿರುವ ಕಾರಣ ರಂಗ ತಂಡಗಳು ಟಿಕೆಟ್‌ ದರವನ್ನು ಶೇ 25ರವರೆಗೂ ಹೆಚ್ಚಳ ಮಾಡಿವೆ.

‘ಕೋವಿಡ್‌ನಿಂದ ಕಲಾ ಚಟುವಟಿಕೆಗಳು ಸಂಪೂರ್ಣ ಸ್ಥಗಿತವಾದ ಪರಿಣಾಮ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದರು. ಈಗ ರಂಗ ಮಂದಿರಗಳು ತೆರೆದಿರುವುದು ಹೊಸ ಭರವಸೆಯನ್ನುಂಟುಮಾಡಿದೆ. ರಂಗಶಂಕರದಲ್ಲಿ ಈ ತಿಂಗಳು ಪೂರ್ತಿ ವಿವಿಧ ಕಲಾ ತಂಡಗಳು ಬುಕ್ಕಿಂಗ್ ಮಾಡಿವೆ. ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸಿ, ಪ್ರದರ್ಶನ ನೀಡಲಾಗುತ್ತಿದೆ. ಮುಂಗಡವಾಗಿ ಟಿಕೆಟ್ ಕಾಯ್ದಿರಿಸುವವರ ಸಂಖ್ಯೆ ಹೆಚ್ಚಿದೆ’ ಎಂದು ರಂಗ ನಿರ್ದೇಶಕ ಕಿರಣ್ ವಟಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.