ಬೆಳಗಾವಿ: ‘ಬೆಂಗಳೂರು– ಹುಬ್ಬಳ್ಳಿ– ಕೊಲ್ಹಾಪುರ ನಡುವೆ ನಿತ್ಯ ಸಂಚರಿಸುವ ರಾಣಿ ಚನ್ನಮ್ಮ ಎಕ್ಸ್ಪ್ರೆಸ್ ರೈಲಿನ ವೇಳಾಪಟ್ಟಿ ಬದಲಾಯಿಸುವ ಬಗ್ಗೆ ಚಿಂತನೆ ನಡೆದಿದೆ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.
ಫೌಂಡ್ರಿ ಕ್ಲಸ್ಟರ್ ಶನಿವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಸದ್ಯಕ್ಕೆ ಈ ರೈಲು ಬೆಂಗಳೂರಿನಿಂದ ರಾತ್ರಿ 9.15ಕ್ಕೆ ಹೊರಟು, ಬೆಳಗಾವಿಗೆ ಬೆಳಿಗ್ಗೆ 9.30ಕ್ಕೆ ಬರುತ್ತದೆ. ಕಚೇರಿ ಕೆಲಸಕ್ಕೆ ಹೋಗುವವರೆಗೆ ತುಂಬಾ ಅನಾನುಕೂಲವಾಗುತ್ತದೆ. ಅದಕ್ಕಾಗಿ ಬೆಳಿಗ್ಗೆ 6.30ಕ್ಕೆ ಬೆಳಗಾವಿಗೆ ಬರುವಂತಾದರೆ ಒಳ್ಳೆಯದು ಎಂದು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದುಹೇಳಿದರು.
‘ಮೈಸೂರು– ಧಾರವಾಡ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಬೆಳಗಾವಿ ಜನರಿಗೆ ಅನುಕೂಲ ಮಾಡಿಕೊಡಲು ಸಿದ್ಧನಿದ್ದೇನೆ. ಉದ್ಯಮಿಗಳು ಈ ಅವಕಾಶವನ್ನು ಬಳಸಿಕೊಳ್ಳಬೇಕು. ಬೆಳಗಾವಿಯಲ್ಲಿ ಹೂಡಿಕೆ ಮಾಡಬೇಕು’ ಎಂದು ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.