ಬೆಂಗಳೂರು: ಚಲಿಸುತ್ತಿದ್ದ ಸ್ಕೂಟರ್ಗೆ ಹಿಂಬದಿಯಿಂದ ಬಂದ ಟಿಪ್ಪರ್ ವಾಹನ ಡಿಕ್ಕಿ ಹೊಡೆದಿದ್ದರಿಂದ ಲಕ್ಷ್ಮಿ (42) ಎಂಬುವರು ಮೃತಪಟ್ಟಿದ್ದಾರೆ. ಈ ಸಂಬಂಧ ಯಶವಂತಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಚಿಕ್ಕಮಾರನಹಳ್ಳಿಯ ಎಂ.ಎಸ್.ಆರ್.ನಗರ ನಿವಾಸಿಯಾಗಿರುವ ಲಕ್ಷ್ಮಿ, ಶನಿವಾರ ರಾತ್ರಿ ರಾಜರಾಜೇಶ್ವರಿ ನಗರದಲ್ಲಿರುವ ಅಣ್ಣನ ಮನೆಯಿಂದ ಮರಳುತ್ತಿದ್ದರು. ಯಶವಂತಪುರ ಮೇಲ್ಸೇತುವೆಯ ಇಳಿಜಾರು ಭಾಗದಲ್ಲಿ ಸಾಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಟಿಪ್ಪರ್ ವಾಹನ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ಘಟನೆ ನಡೆದ ಬೆನ್ನಲ್ಲೇ ಚಾಲಕನು ಟಿಪ್ಪರ್ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಆತನಿಗಾಗಿ ಶೋಧ ನಡೆಸಲಾಗುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ’ ಎಂದು ತಿಳಿಸಿದರು.
ಕ್ರೇನ್ ಹರಿದು ಕ್ಲೀನರ್ ಸಾವು: ವಿದ್ಯಾರಣ್ಯಪುರದ ಹನುಮಾನ್ ಲೇಔಟ್ ಬಳಿ ಕ್ರೇನ್ ಹರಿದು ಅದರ ಕ್ಲೀನರ್ ಸ್ಟೀಫನ್ ಸೆಲ್ವಕುಮಾರ್ (29) ಎಂಬುವರು ಮೃತಪಟ್ಟಿದ್ದಾರೆ. ಈ ಸಂಬಂಧ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಸ್ಟೀಫನ್ ಅವರಿದ್ದ ಕ್ರೇನ್ ವಿದ್ಯುತ್ ಕೇಬಲ್ಗಳನ್ನು ಹೊತ್ತು ಹನುಮಾನ್ ದೇವಾಲಯದ ಬಳಿ ಇರುವ ತಿಂಡ್ಲು–ನಂಜಪ್ಪ ವೃತ್ತದತ್ತ ಸಾಗುತ್ತಿತ್ತು. ಸ್ಟೀಫನ್, ಈ ಕ್ರೇನ್ನಿಂದ ಇಳಿದು ಉಳಿದ ವಾಹನ ಸವಾರರಿಗೆ ಪಕ್ಕಕ್ಕೆ ಹೋಗುವಂತೆ ಸೂಚಿಸುತ್ತಿದ್ದ. ಈ ವೇಳೆ ಹಿಂದಿನಿಂದ ಬಂದ ಕ್ರೇನ್ ಆತನ ಮೇಲೆ ಹರಿದಿದೆ. ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣ. ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.