ಬೆಂಗಳೂರು: ‘ಮಹಿಳಾ ಉದ್ಯಮಿಗಳಿಗೂ ವೇದಿಕೆ ಜತೆಗೆ ಸೂಕ್ತ ತರಬೇತಿ, ಮಾರ್ಗದರ್ಶನ ದೊರಕಿದರೆ ದೇಶದ ಅಭಿವೃದ್ಧಿಯಲ್ಲಿ ಅವರು ಕೂಡ ಸಮಾನವಾಗಿ ಪಾಲ್ಗೊಳ್ಳಲು ಸಾಧ್ಯ’ ಎಂದು ಉಬುಂಟು ಒಕ್ಕೂಟದ ಸಂಸ್ಥಾಪಕರಾದ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಹೇಳಿದರು.
ಮಲೇಷ್ಯಾದಲ್ಲಿ ನಡೆದಿರುವ 2025ರ ಯುನೈಟೆಡ್ ಎಕನಾಮಿಕ್ ಶೃಂಗಸಭೆಯಲ್ಲಿ ಭಾರತ ನಿಯೋಗದ ನೇತೃತ್ವವಹಿಸಿ ಮಾತನಾಡಿದರು.
‘ಕೆಲವು ಮಹಿಳೆಯರ ಗುಂಪು ಪ್ರತ್ಯೇಕವಾಗಿ ಕೆಲಸ ಮಾಡುತ್ತಿತ್ತು. ಒಟ್ಟಾಗಿ ಬೆಳೆಯಬೇಕು ಎಂಬ ಆಲೋಚನೆಯಲ್ಲಿ ʼಉಬುಂಟು ಒಕ್ಕೂಟʼವನ್ನು ಸ್ಥಾಪಿಸಲಾಯಿತು. ಇಂದು ಉಬುಂಟು 12 ರಾಜ್ಯಗಳ 60ಕ್ಕೂ ಹೆಚ್ಚು ಸಂಘಗಳನ್ನು ಒಳಗೊಂಡಿದ್ದು, 30,000 ಮಹಿಳಾ ಉದ್ಯಮಿಗಳಿಗೆ ಬೆಂಬಲ ನೀಡುತ್ತಿದೆ. ಈ ಒಕ್ಕೂಟದ ಹತ್ತು ಪ್ರತಿನಿಧಿಗಳು ಶೃಂಗಸಭೆಯಲ್ಲಿ ಭಾರತದ ನಿಯೋಗವನ್ನು ಪ್ರತಿನಿಧಿಸುತ್ತಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದರು.
‘ವಿಶ್ವಸಂಸ್ಥೆಯ ಶೃಂಗಸಭೆಯು ನಮ್ಮ ಉದ್ಯಮಿಗಳಿಗೆ ಜಾಗತಿಕ ಪ್ರತಿನಿಧಿಗಳೊಂದಿಗೆ ಚರ್ಚಿಸಲು, ಮಾರುಕಟ್ಟೆಗಳನ್ನು ಅನ್ವೇಷಿಸಿ ವ್ಯವಹಾರಗಳನ್ನು ವಿಸ್ತರಿಸಲು ಅವಕಾಶ ಒದಗಿಸುತ್ತಿದೆ’ ಎಂದರು.
ಒಕ್ಕೂಟದ ಕಾರ್ಯದರ್ಶಿ ಜ್ಯೋತಿ ಬಾಲಕೃಷ್ಣ, ಜಿಸಿಸಿಐ ಮಹಿಳಾ ವಿಭಾಗದ ಅಧ್ಯಕ್ಷೆ ಗೋವಾದ ಆಶಾ ಅರೋಂಡೇಕರ್, ಧಾರವಾಡದ ವೆಲಾಸ್ಕಾ ಎಂಟರ್ಪ್ರೈಸಸ್ನ ವಿದ್ಯಾವತಿ ಭಾವಿ, ರೀಥಿಂಕ್ ಸ್ನ್ಯಾಕ್ಸ್ನ ಸ್ಥಾಪಕಿ ದೀಪಿಕಾ ಕಿರಣ್, ಮೀಡಿಯಾ ಕನೆಕ್ಟ್ನ ಸಂಸ್ಥಾಪಕರಾದ ದಿವ್ಯಾ ರಂಗೇನಹಳ್ಳಿ, ತುಮಕೂರಿನ ಇಕೋ-ಕಾನ್ ಗ್ರೀನ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ನ ಜಯಲಕ್ಷ್ಮಿ, ಸುಪ್ರೀಂ ಕೋರ್ಟ್ ವಕೀಲರಾದ ನಾಜಿಶ್ ಖಾನ್, ಜಿ.ಪಿ. ನಿಸರ್ಗ ಮತ್ತು ವಿಭಾ ದೇವರಾಜ್ ಭಾರತವನ್ನು ಪ್ರತಿನಿಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.