ADVERTISEMENT

ಜೋಡಿ ಹತ್ಯೆಗೆ ಶಸ್ತ್ರಾಸ್ತ್ರ ಪೂರೈಸಿದ್ದ ಪಾತಕಿ

47 ಕೇಸ್‌ಗಳ ಮಾಹಿತಿ ಪಡೆದ ಜಂಟಿ ಕಮಿಷನರ್

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 5:42 IST
Last Updated 26 ಫೆಬ್ರುವರಿ 2020, 5:42 IST
ರವಿ ಪೂಜಾರಿ
ರವಿ ಪೂಜಾರಿ   

ಬೆಂಗಳೂರು: ತಿಲಕ್‌ನಗರ ಠಾಣೆ ವ್ಯಾಪ್ತಿಯಲ್ಲಿ 2007ರ ಫೆ. 15ರಂದು ನಡೆದಿದ್ದ ಶೈಲಜಾ ಹಾಗೂ ರವಿ ಎಂಬುವರ ಹತ್ಯೆಗೆ,ಭೂಗತ ಪಾತಕಿ ರವಿ ಪೂಜಾರಿಯೇ ಶಸ್ತ್ರಾಸ್ತ್ರ ಪೂರೈಕೆ ಮಾಡಿದ್ದ. ಕೃತ್ಯ ಎಸಗಿದ್ದ ಸಹಚರರಿಗೆ ಹಣಕಾಸು ನೆರವು ಸಹ ನೀಡಿದ್ದ.

ಬೆಂಗಳೂರಿನ ಸಿಸಿಬಿ ಪೊಲೀಸರ ಕಸ್ಟಡಿಯಲ್ಲಿರುವ ಪೂಜಾರಿ, ವಿಚಾರಣೆ ವೇಳೆ ಈ ಮಾಹಿತಿ ಬಾಯಿಬಿಟ್ಟಿದ್ದಾನೆ.

‘ಶಬನಂ ಬಿಲ್ಡರ್ಸ್’ ನಡೆಸುತ್ತಿದ್ದ ಅಂದಿನ ಕಾರ್ಪೊರೇಟರ್ ಸಮೀವುಲ್ಲಾ ಅವರಿಗೆ ವಿದೇಶದಿಂದಲೇ ಬೆದರಿಕೆ ಕರೆ ಮಾಡಿದ್ದ ಪೂಜಾರಿ, ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹಣ ನೀಡಲು ಒಪ್ಪದಿದ್ದಾಗಲೇ ಹತ್ಯೆ ಮಾಡಿಸಲು ಸಂಚು ರೂಪಿಸಿದ್ದ. ಆತನ ಸಹಚರರು ಮುಸುಕುಧಾರಿಗಳಾಗಿ ಕಚೇರಿ ಮೇಲೆ ದಾಳಿ ಮಾಡಿ, ಉದ್ಯೋಗಿ ಶೈಲಜಾ ಹಾಗೂ ಕಾರು ಚಾಲಕ ರವಿ ಅವರನ್ನು ಗುಂಡಿಕ್ಕಿ ಕೊಂದಿದ್ದರು.

ADVERTISEMENT

ಕಚೇರಿಯ ಗಾಜಿಗೆ ‘ರವಿ ಪೂ
ಜಾರಿ’ ಅಕ್ಷರವುಳ್ಳ ಭಿತ್ತಿಪತ್ರ ಅಂಟಿಸಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಪ್ರಕರಣದ ತನಿಖೆ ಕೈಗೊಂಡಿದ್ದ ಸಿಸಿಬಿ ಪೊಲೀಸರು, ಪೂಜಾರಿಯ ಸಹಚರರು ಎನ್ನಲಾದ ಕವಿರಾಜ್, ಮೋಹನ್, ಶಿವಾ, ಇಬ್ರಾಹಿಂ, ಮಹೇಶ್, ಸಂತೋಷ್ ರೈ,ಪ್ರದೀಪ್,ಆಜಾದ್ ಹಾಗೂ ಉದಯ್‌ಕುಮಾರ್ ಹೆಗ್ಡೆಯನ್ನು 2009ರಲ್ಲಿ ಸೆರೆ ಹಿಡಿದಿದ್ದರು. ಆದರೆ, ಪೂಜಾರಿ ಸುಳಿವು ಮಾತ್ರ ಸಿಕ್ಕಿರಲಿಲ್ಲ.ಇದೇ ಪ್ರಕರಣದಲ್ಲಿ ಇನ್ನೊಬ್ಬ ಆರೋಪಿ ಕುಂದಾಪುರದ ಸುರೇಶ್ ಪೂಜಾರ ಸಹ ತಲೆಮರೆಸಿಕೊಂಡಿದ್ದಾನೆ.

‘ಜೋಡಿ ಕೊಲೆ ಪ್ರಕರಣದಲ್ಲಿ ರವಿ ಪೂಜಾರಿ ಭಾಗಿ ಬಗ್ಗೆ ಪುರಾವೆಗಳು ಸಿಕ್ಕಿವೆ. ಈ ಪ್ರಕರಣದಲ್ಲಿ ಆರೋಪಿ ಹೇಳಿಕೆ ಪಡೆಯಲಾಗುತ್ತಿದ್ದು, ಅದರ ಜತೆಗೇ ದೋಷಾರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ನಾಡ ಪಿಸ್ತೂಲ್ ಜಪ್ತಿ: ‘2010ರಲ್ಲಿಶಿವಾಜಿನಗರ ‍ಪೊಲೀಸರು, ಪೂಜಾರಿ ಸಹಚರರು ಎನ್ನಲಾದ ಕೋಲಾರದ ಆನಂದ್‌ಕುಮಾರ್ ಅಲಿಯಾಸ್ ಅಂತು ಹಾಗೂ ಬೊಮ್ಮನಹಳ್ಳಿಯ ಮಧುಸೂದನ್ ಎಂಬುವವರನ್ನು ಬಂಧಿಸಿದ್ದರು. ಅವರಿಬ್ಬರ ಬಳಿ ಸಿಕ್ಕಿದ್ದ ಎರಡು ನಾಡ ಪಿಸ್ತೂಲ್‌ಗಳನ್ನೂ ಪೂಜಾರಿಯೇ ನೀಡಿದ್ದ. ಆ ಬಗ್ಗೆಯೂ ಆತನಿಂದ ಮಾಹಿತಿ ಪಡೆಯಲಾಗುತ್ತಿದೆ’ ಎಂದು ಅಧಿಕಾರಿ ತಿಳಿಸಿದರು.

ಮಾಹಿತಿ ಪಡೆದ ಜಂಟಿ ಕಮಿಷನರ್: ಪೂಜಾರಿ ವಿರುದ್ಧ ರಾಜ್ಯದಲ್ಲಿ 97 ಪ್ರಕರಣಗಳು ದಾಖಲಾಗಿವೆ. ಆ ಪೈಕಿ 47 ಪ್ರಕರಣಗಳು ಬೆಂಗಳೂರಿನ ಠಾಣೆಗಳಲ್ಲಿ ದಾಖಲಾಗಿದ್ದು, ಅವೆಲ್ಲ ಪ್ರಕರಣಕ್ಕೂ ಈಗ ಜೀವ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.