ADVERTISEMENT

ರಿಯಲ್ ಎಸ್ಟೇಟ್ ಏಜೆಂಟ್‌ನ ಇರಿದು ಹತ್ಯೆ

ರಾಜರಾಜೇಶ್ವರಿ ನಗರದಲ್ಲಿ ಶವ ಪತ್ತೆ * ಜೂಜಾಟದ ವೇಳೆ ಕೊಲೆ ಶಂಕೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 19:43 IST
Last Updated 7 ಏಪ್ರಿಲ್ 2019, 19:43 IST

ಬೆಂಗಳೂರು: ರಿಯಲ್ ಎಸ್ಟೇಟ್‌ ಏಜೆಂಟ್ ವಿ. ರಮೇಶ್‌ (38) ಎಂಬುವರನ್ನು ಕೊಲೆ ಮಾಡಲಾಗಿದ್ದು, ರಾಜರಾಜೇಶ್ವರಿನಗರ ಸಮೀಪದ ಕೃಷ್ಣಪ್ಪ ಲೇಔಟ್‌ನಲ್ಲಿ ಭಾನುವಾರ ಬೆಳಿಗ್ಗೆ ಶವ ಪತ್ತೆಯಾಗಿದೆ.

‘ಹೊಸಕೆರೆಹಳ್ಳಿ ನಿವಾಸಿ ಆಗಿದ್ದ ರಮೇಶ್, ಶನಿವಾರ ಸಂಜೆ 6ರ ಸುಮಾರಿಗೆ ಮನೆಯಿಂದ ಹೊರಟಿದ್ದರು. ತಡರಾತ್ರಿ ಸ್ನೇಹಿತರೇ ಅವರನ್ನು ಕೊಲೆ ಮಾಡಿ ಶವವನ್ನು ಎಸೆದು ಹೋಗಿರುವ ಶಂಕೆ ಇದೆ ಎಂದು ರಾಜರಾಜೇಶ್ವರಿನಗರ ಪೊಲೀಸರು ತಿಳಿಸಿದರು.

ಜೂಜಾಟದ ವೇಳೆ ಜಗಳ: ‘ಯುಗಾದಿ ಹಬ್ಬವಿದ್ದಿದ್ದರಿಂದ ರಮೇಶ್‌, ಸ್ನೇಹಿತರೊಂದಿಗೆ ಜೂಜು ಆಡಲು ಹೋಗಿದ್ದರು ಎಂದು ಗೊತ್ತಾಗಿದೆ. ಅದೇ ವೇಳೆ ಜಗಳವಾಗಿ ಅವರನ್ನು ಕೊಲೆ ಮಾಡಿರುವ ಮಾಹಿತಿ ಇದೆ’ ಎಂದು ಪೊಲೀಸರು ವಿವರಿಸಿದರು.

ADVERTISEMENT

‘ರಮೇಶ್ ಮತ್ತು ಸ್ನೇಹಿತರು, ಹೊಸಕೆರೆಹಳ್ಳಿ ಬಳಿ ಎಲ್ಲರೂ ಒಟ್ಟಿಗೆ ಸೇರಿ ಹಣ ಕಟ್ಟಿ ಜೂಜು ಆಡುತ್ತಿದ್ದರು. ಹೆಚ್ಚು ಹಣ ಗೆದ್ದ ರಮೇಶ್, ಆಟ ಅರ್ಧಕ್ಕೆ ನಿಲ್ಲಿಸಿ ಮನೆಗೆ ಹೋಗುವುದಾಗಿ ಹೇಳಿ ಹೊರಟಿದ್ದರು. ಅವರನ್ನು ತಡೆದ ಸ್ನೇಹಿತರು, ಆಟ ಮುಂದುವರಿಸಲು ಒತ್ತಾಯಿಸಿದರು.’

‘ಪರಿಸ್ಥಿತಿ ವಿಕೋಪಕ್ಕೆ ಹೋಗಿ ಸ್ನೇಹಿತರೇ ರಮೇಶ್ ಅವರ ತಲೆಗೆ ರಾಡ್‌ನಿಂದ ಹೊಡೆದು, ಚಾಕುವಿನಿಂದ ಇರಿದು ಕೊಂದಿದ್ದಾರೆ ಎಂದು ಕೆಲವರು ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.