ADVERTISEMENT

ರಿಯಲ್‌ ಎಸ್ಟೇಟ್‌ ಉದ್ಯಮಿ ಅಪಹರಣ ಪ್ರಕರಣ: ಆರೋಪಿಗಳಿಗೆ ಶೋಧ

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 18:06 IST
Last Updated 18 ಜನವರಿ 2024, 18:06 IST
ಅಪಹರಣ (ಪ್ರಾತಿನಿಧಿಕ ಚಿತ್ರ)
ಅಪಹರಣ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರನ್ನು ಅಪಹರಿಸಿ ಕಿರುಕುಳ ನೀಡಿದ್ದ ಎಂಟು ಮಂದಿ ಆರೋಪಿಗಳ ವಿರುದ್ಧ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಕೆಂಗೇರಿ ಉಪನಗರ ನಿವಾಸಿ, ಉದ್ಯಮಿ ಶಿವರಾಜ್ ಗೋನಿ ಅವರು ನೀಡಿದ್ದ ದೂರು ಆಧರಿಸಿ ವೀರೇಶ್ ಸೈದು, ರಶ್ಮಿ, ಕೃಷ್ಣಪ್ಪ, ರಾಜಶೇಖರ್, ಕಾರ್ತಿಕ್, ರಘು ಸೇರಿದಂತೆ ಎಂಟು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಅಶೋಕ್ ಶಿವರಾಜ್‌ ಅವರನ್ನು ಜ.12ರಂದು ಜ್ಞಾನಭಾರತಿ ಸಮುದಾಯ ಭವನದ ಬಳಿ ಆರೋಪಿಗಳು ಅಪರಿಸಿದ್ದರು.

ADVERTISEMENT

‘ಅಶೋಕ್‌ ಶಿವರಾಜ್‌ ಅವರು ಹಲವು ವರ್ಷಗಳಿಂದ ರಿಯಲ್ ಎಸ್ಟೇಟ್ ಉದ್ಯಮಿ ನಡೆಸುತ್ತಿದ್ದರು. ಅವರಿಗೆ ಸೇರಿದ ಆಸ್ತಿ ಕಬಳಿಸುವ ಉದ್ದೇಶದಿಂದ ಆರೋಪಿಗಳು, ಕಳೆದ ಕೆಲವು ದಿನಗಳಿಂದ ಅಶೋಕ್‌ ಅವರನ್ನು ಗೃಹ ಬಂಧನದಲ್ಲಿಟ್ಟು, ಫ್ಲ್ಯಾಟ್ ಸೇರಿ ಕೆಲವು ಆಸ್ತಿಗಳನ್ನು ಅಕ್ರಮವಾಗಿ ಕಬಳಿಸಿದ್ದರು’ ಎಂಬ ಆರೋಪವಿದೆ.

‘ಗೃಹ ಬಂಧನದಿಂದ ತಪ್ಪಿಸಿಕೊಂಡು ಬಂದಿದ್ದ ಅಶೋಕ್ ಅವರು ಪೊಲೀಸರಿಗೆ ದೂರು ನೀಡಿದ್ದರು. ದೂರು ನೀಡಿದ್ದಕ್ಕೆ ಸಿಟ್ಟಿಗೆದ್ದು ಮತ್ತೆ ಅಶೋಕ್ ಅವರನ್ನು ಅಪಹರಿಸಿ ಕೊಲೆ ಮಾಡುವುದಾಗಿ ಬೆದರಿಸಿ ಬಿಟ್ಟು ಕಳುಹಿಸಿದ್ದರು’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.