ಬೆಂಗಳೂರು: ‘ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು, ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ತಾಯಿ ಗೌರಮ್ಮ ಅವರ ಹೇಳಿಕೆಯನ್ನು ಕನಕಪುರದ ಅವರ ನಿವಾಸದಲ್ಲೇ ಹೋಗಿ ದಾಖಲಿಸಿಕೊಳ್ಳಬೇಕು’ ಎಂದು ಹೈಕೋರ್ಟ್ ಆದೇಶಿಸಿದೆ.
ಇ.ಡಿ ನೀಡಿರುವ ಸಮನ್ಸ್ ಪ್ರಶ್ನಿಸಿ ಗೌರಮ್ಮ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ಏಕಸದಸ್ಯ ಪೀಠ ಬುಧವಾರ ವಿಚಾರಣೆ ನಡೆಸಿತು.
‘ವಿಚಾರಣೆಯನ್ನು ಕನ್ನಡದಲ್ಲೇ ನಡೆಸಬೇಕು. ಆಡಿಯೋ ರೆಕಾರ್ಡ್ ಮಾಡಬೇಕು. ವಿಚಾರಣೆಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಅಗತ್ಯ ಭದ್ರತೆ ನೀಡಬೇಕು’ ಎಂದು ನ್ಯಾಯಪೀಠ, ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದೆ.
‘ಇ.ಡಿ ಅಧಿಕಾರಿಗಳ ವಿಚಾರಣೆಗೆ ಯಾರೂ ಅಡ್ಡಿಪಡಿಸುವಂತಿಲ್ಲ, ಯಾವುದೇ ಪ್ರತಿಭಟನೆಗಳನ್ನೂ ನಡೆಸುವಂತಿಲ್ಲ’ ಎಂದು ನ್ಯಾಯಪೀಠ ಹೇಳಿದೆ.
ಅಕ್ರಮ ಹಣ ವರ್ಗಾವಣೆ ಆರೋಪದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ 2019ರ ಅ.9ರಂದು ನೀಡಿರುವ ಸಮನ್ಸ್ ಅನ್ನು ಗೌರಮ್ಮ ಪ್ರಶ್ನಿಸಿದ್ದಾರೆ.
ಆಕ್ಷೇಪಣೆ ಏನು?: ‘ಗೌರಮ್ಮ ಅವರಿಗೆ 85 ವರ್ಷವಾಗಿದೆ. ಕೆಲವು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಹಾಗಾಗಿ, ಅವರ ನಿವಾಸದಲ್ಲಿಯೇ ಹೇಳಿಕೆ ದಾಖಲಿಸಿಕೊಳ್ಳಲು ಇ.ಡಿಗೆ ನಿರ್ದೇಶಿಸಬೇಕು. ಅವರ ವಿರುದ್ಧ ಯಾವುದೇ ಎಫ್ಐಆರ್ ಅಥವಾ ದೋಷಾರೋಪ ಪಟ್ಟಿ ದಾಖಲಾಗಿಲ್ಲ. ಬಲವಂತವಾಗಿ ಅವರ ಬಳಿ ಹೇಳಿಕೆ ಪಡೆಯಲು ಪ್ರಯತ್ನ ನಡೆಸಲಾಗುತ್ತಿದೆ’ ಎಂಬುದು ಅರ್ಜಿದಾರರ ಪರ ವಕೀಲರ ಆಕ್ಷೇಪ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.