ಬೆಂಗಳೂರು: ರೆಮ್ಡಿಸಿವಿರ್ ಚುಚ್ಚುಮದ್ದಿಗೆ ₹ 15 ಸಾವಿರ ಪಡೆದಿದ್ದ ಹಾಗೂ ಸೋಂಕಿತ ಮಹಿಳೆಗೆ ಸೂಕ್ತ ಚಿಕಿತ್ಸೆ ನೀಡದ ಆರೋಪದಡಿ ವಿಜಯನಗರದ ಭಾರತಿ ಆಸ್ಪತ್ರೆ ವಿರುದ್ಧ ಎಫ್ಐಆರ್ ದಾಖಲಾಗಿದೆ.
'ಬಿಬಿಎಂಪಿ ವೈದ್ಯ ಡಾ. ರಾಜೇಂದ್ರ ನೀಡಿರುವ ದೂರಿನಡಿ ಆಸ್ಪತ್ರೆ ವಿರುದ್ಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ' ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.
'ಕೊರೊನಾ ಸೋಂಕಿತ ಮಹಿಳೆ ಚಿಕಿತ್ಸೆಗಾಗಿ ಭಾರತಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಂದ ₹15 ಸಾವಿರ ಪಡೆದಿದ್ದ ಆಸ್ಪತ್ರೆಯವರು, ರೆಮ್ಡಿಸಿವಿರ್ ಚುಚ್ಚುಮದ್ದು ನೀಡಿದ್ದರು. ದುಬಾರಿ ಬೆಲೆ ಪಡೆದಿದ್ದನ್ನು ಪ್ರಶ್ನಿಸಿದ್ದ ಸೋಂಕಿತೆ ಕಡೆಯವರು, ಔಷಧ ನಿಯಂತ್ರಕರಿಗೆ ದೂರು ನೀಡಿದ್ದರು.'
'ದೂರು ನೀಡಿದ್ದಕ್ಕೆ ಗರಂ ಆದ ಆಸ್ಪತ್ರೆ ವೈದ್ಯರು, ಚಿಕಿತ್ಸೆ ನೀಡಲು ಆಗುವುದಿಲ್ಲವೆಂದು ಏಕಾಏಕಿ ಸೋಂಕಿತೆಯನ್ನು ಆಸ್ಪತ್ರೆಯಿಂದ ಹೊರಗೆ ಹಾಕಿದ್ದರು. ದಿಕ್ಕು ತೋಚದಂತಾದ ಸಂಬಂಧಿಕರು, ಮಹಿಳೆಯನ್ನು ಬೇರೊಂದು ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಯೇ ಚಿಕಿತ್ಸೆಗೆ ಸ್ಪಂದಿಸದೇ ಮಹಿಳೆ ತೀರಿಕೊಂಡರು' ಎಂದೂ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.