ಬೆಂಗಳೂರು: ರೆಮ್ಡಿಸಿವಿರ್ ಚುಚ್ಚುಮದ್ದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪದಡಿ ಡಾ. ಅಜಯ್ ಕುಮಾರ್ ಯಾದವ್ (25) ಎಂಬುವರನ್ನು ಕೆ.ಜಿ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
‘ಉತ್ತರ ಪ್ರದೇಶದ ಅಜಯ್ ಕುಮಾರ್, ನಗರದ ಬಾಗಲೂರು ಬಳಿ ವಾಸವಿದ್ದರು. ’ಅಪ್ನ ಕ್ಲಿನಿಕ್’ ಹೆಸರಿನಲ್ಲಿ ಆಸ್ಪತ್ರೆ ನಡೆಸುತ್ತಿದ್ದರು. ಅವರಿಂದ ಚುಚ್ಚುಮದ್ದಿನ 8 ಬಾಟಲಿಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
’ಠಾಣೆ ವ್ಯಾಪ್ತಿಯ ಎಚ್ಬಿಆರ್ ಲೇಔಟ್ ಬಳಿ ರೆಮ್ಡಿಸಿವಿರ್ ಚುಚ್ಚುಮದ್ದು ಅಕ್ರಮ ಮಾರಾಟದ ಬಗ್ಗೆ ಮಾಹಿತಿ ಬಂದಿತ್ತು. ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದೂ ತಿಳಿಸಿದರು.
‘ಆರೋಪಿಯ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕ (ಐಸಿಯು) ಇದೆ. ಅಲ್ಲಿ ದಾಖಲಾಗಿದ್ದ ರೋಗಿಗಳ ಹೆಸರಿನಲ್ಲಿ ಬೇರೆ ಆಸ್ಪತ್ರೆಗಳಿಂದ ಚುಚ್ಚುಮದ್ದು ಪಡೆಯುತ್ತಿದ್ದ ಆರೋಪಿ, ಅವುಗಳನ್ನೇ ₹ 11,000 ದರಕ್ಕೆ ಮಾರಾಟ ಮಾಡುತ್ತಿದ್ದರು. ಅವರು ಇದುವರೆಗೂ ಹಲವರಿಗೆ ಚುಚ್ಚುಮದ್ದು ಮಾರಿರುವ ಮಾಹಿತಿ ಇದೆ. ತನ್ನದೇ ಆಸ್ಪತ್ರೆಯ ರೋಗಿಗಳಿಗೂ ಸರ್ಕಾರ ನಿಗದಿಪಡಿಸಿದ್ದ ದರಕ್ಕಿಂತ ದುಬಾರಿ ಬೆಲೆಗೆ ಚುಚ್ಚುಮದ್ದು ನೀಡಿದ್ದರು’ ಎಂದೂ ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.