ADVERTISEMENT

ಸಾಹಿತ್ಯ, ಸಂಸ್ಕೃತಿಗೆ ಜೀವಂತಿಕೆ ನೀಡಿದ ಕವಿ: ಡಾ.ಬಸವರಾಜ ಕಲ್ಗುಡಿ

‘ಇಳಿದು ಬಾ ತಾಯಿ ಇಳಿದು ಬಾ....’ ಬೇಂದ್ರೆ ನಮನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 15:26 IST
Last Updated 31 ಜನವರಿ 2023, 15:26 IST
ನಗರದಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ‘ಬೇಂದ್ರೆ ನಮನ’ ಕಾರ್ಯಕ್ರಮದಲ್ಲಿ (ಎಡದಿಂದ) ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು, ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿ, ಸಾಹಿತಿ ಡಾ.ಬಸವರಾಜ ಕಲ್ಗುಡಿ, ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ ಜೋಶಿ, ಕವಯತ್ರಿ ಪ್ರೊ.ಎಂ.ಆರ್. ಕಮಲಾ, ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು ಬೇಂದ್ರೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು - ಪ್ರಜಾವಾಣಿ ಚಿತ್ರ
ನಗರದಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ‘ಬೇಂದ್ರೆ ನಮನ’ ಕಾರ್ಯಕ್ರಮದಲ್ಲಿ (ಎಡದಿಂದ) ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು, ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿ, ಸಾಹಿತಿ ಡಾ.ಬಸವರಾಜ ಕಲ್ಗುಡಿ, ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ ಜೋಶಿ, ಕವಯತ್ರಿ ಪ್ರೊ.ಎಂ.ಆರ್. ಕಮಲಾ, ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು ಬೇಂದ್ರೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು - ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಗೆ ಜೀವಂತಿಕೆ ನೀಡಿದ ಅಪರೂಪದ ಕವಿ ದ.ರಾ.ಬೇಂದ್ರೆ. ಅವರು ಸಂಖ್ಯಾಶಾಸ್ತ್ರ ಇಟ್ಟುಕೊಂಡು ಕವನಗಳನ್ನು ರಚಿಸಿದ್ದರು’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿಕಟಪೂರ್ವ ನಿರ್ದೇಶಕ ಡಾ.ಬಸವರಾಜ ಕಲ್ಗುಡಿ ಅಭಿಪ್ರಾಯಪಟ್ಟರು.

ವರಕವಿ ದ.ರಾ.ಬೇಂದ್ರೆ ಅವರ 127ನೇ ಜನ್ಮದಿನದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್‌ ಮಂಗಳವಾರ ‘ಇಳಿದು ಬಾ ತಾಯಿ ಇಳಿದು ಬಾ... ಬೇಂದ್ರೆ ನಮನ’ ವಿಶೇಷ ಕಾರ್ಯಕ್ರಮದಲ್ಲಿ ʻಬೇಂದ್ರೆ ಅವರ ಸೃಜನಶೀಲತೆಯ ವಿಶಿಷ್ಟತೆʼ ಎಂಬ ವಿಷಯ ಕುರಿತು ಮಾತನಾಡಿದರು.

‘ಬೇಂದ್ರೆ ಅವರ ಸಾಹಿತ್ಯದಲ್ಲಿ ವ್ಯಕ್ತಿ ವಿಶಿಷ್ಟತೆಗಳ ಹುಡುಕಾಟದ ಬದಲಿಗೆ ಜೀವನ ಸೃಜನಶೀಲತೆ ಹುಡುಕಾಟವೇ ಇತ್ತು’ ಎಂದು ಹೇಳಿದರು.

ADVERTISEMENT

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಮಾತನಾಡಿ, ‘ನಿತ್ಯವೂ ನೂತನವಾಗಿರುವ ಸಾಹಿತ್ಯವನ್ನು ನೀಡಿದ ದ.ರಾ.ಬೇಂದ್ರೆ ಅವರ ನೆನಪು ಕನ್ನಡಕ್ಕೆ ಹಾಗೂ ಕನ್ನಡ ನಾಡಿಗೆ ಸದಾ ಚೇತೋಹಾರಿ’ ಎಂದು ಹೇಳಿದರು.

‘ಜಗದ ಕವಿ ಕುವೆಂಪು ಹಾಗೂ ವರಕವಿ ಬೇಂದ್ರೆ ಇವರಿಬ್ಬರೂ ಕನ್ನಡ ಸಾಹಿತ್ಯದ ಎರಡು ಕಣ್ಣುಗಳು. ಮನಸ್ಸಿನಲ್ಲಿ ಯಾವುದೇ ತರಹದ ಬೇಸರವಾದಾಗ ನೆನಪಾಗುವುದೇ ಬೇಂದ್ರೆ ಅವರ ಸಾಹಿತ್ಯ. ಕಾರಣ ಅದರಲ್ಲಿ ಜೀವನದ ಎಲ್ಲಾ ಕಾಲಘಟ್ಟಗಳು ಅಡಕವಾಗಿದೆ’ ಎಂದು ಬಣ್ಣಿಸಿದರು.

ಕವಿಯಿತ್ರಿ ಪ್ರೊ.ಎಂ.ಆರ್‌.ಕಮಲಾ ಮಾತನಾಡಿ, ‘ಬೇಂದ್ರೆ ಬರವಣಿಗೆಯಲ್ಲಿ ಅಂತಃಕರಣ ಇರುವುದನ್ನು ಕಂಡಿದ್ದೇವೆ. ʻಒಲವುʼ ಎನ್ನುವ ಶಬ್ದಕ್ಕೆ ಬೇಂದ್ರೆ ಅವರು ಸಾಕಷ್ಟು ಅರ್ಥವನ್ನು ಇಟ್ಟುಕೊಂಡು ಸಾಹಿತ್ಯವನ್ನು ಕನ್ನಡಕ್ಕೆ ನೀಡಿದ ಮಹಾನ್‌ ಅಂತಃಕರಣವಾದಿ’ ಎಂದು ಬಣ್ಣಿಸಿದರು.

ಬೇಂದ್ರೆಯವರ ಕಾವ್ಯಗಳ ಗಾಯನವನ್ನು ಸ್ಮಿತಾ ಕಾರ್ತಿಕ್‌ ಹಾಗೂ ಅವರ ಸಂಗಡಿಗರು ಪ್ರಸ್ತುತ ಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.