ಬೆಂಗಳೂರು: ಮನೆ ಬಾಡಿಗೆ ಕೇಳುವ ಸೋಗಿನಲ್ಲಿ ಮೂವರು ದುಷ್ಕರ್ಮಿಗಳು ಮನೆ ಮಾಲೀಕನ ಮೇಲೆ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿದ್ದು, ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಆ. 20ರಂದು ರಾತ್ರಿ ನಡೆದಿರುವ ಘಟನೆ ಸಂಬಂಧ ಮಲಸಂದ್ರದ ನಿವಾಸಿ ವೆಂಕಟೇಶ್ (27) ಎಂಬುವರು ದೂರು ನೀಡಿದ್ದಾರೆ. ಮೂವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಮನೆ ಬಾಡಿಗೆ ಕೇಳಿಕೊಂಡು ಅಪರಿಚಿತರು, ವೆಂಕಟೇಶ್ ಅವರ ಮನೆಗೆ ಬಂದಿದ್ದರು. ಮನೆ ತೋರಿಸುವ ವೇಳೆಯಲ್ಲಿ ವೆಂಕಟೇಶ್ ಅವರನ್ನು ಹಿಂಬದಿಯಿಂದ ಬಿಗಿಯಾಗಿ ಹಿಡಿದಿದ್ದ ಅಪರಿಚಿತರು, ಬಾಯಿಗೆ ಬಟ್ಟೆ ತುರುಕಿ ಚೀರಾಡದಂತೆ ಮಾಡಿದ್ದರು. ಚಾಕುವಿನಿಂದ ಹಲ್ಲೆ ಸಹ ಮಾಡಿದ್ದರು. ‘ಮನೆಯಲ್ಲಿರುವ ಹಣ ಮತ್ತು ಚಿನ್ನಾಭರಣ ಕೊಡು. ಇಲ್ಲದಿದ್ದರೆ ಹತ್ಯೆ ಮಾಡುತ್ತೇವೆ’ ಎಂದು ಆರೋಪಿಗಳು ಬೆದರಿಸಿದ್ದರು’
‘ಆರೋಪಿಗಳಿಂದ ತಪ್ಪಿಸಿಕೊಂಡಿದ್ದ ವೆಂಕಟೇಶ್, ಮನೆಯಿಂದ ಹೊರಗೆ ಓಡಿ ಬಂದಿದ್ದರು. ಹೆದರಿದ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ’ ಎಂದೂ ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.