ಬೆಂಗಳೂರು: ‘ಬಜೆಟ್ನಲ್ಲಿ ಶೋಷಿತ ಸಮುದಾಯಗಳನ್ನು ವಂಚಿಸಿ ಸಮೃದ್ಧ ಕರ್ನಾಟಕ ನಿರ್ಮಾಣ ಹೇಗೆ ಸಾಧ್ಯ’ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಪ್ರಶ್ನಿಸಿದರು.
‘ರಾಜ್ಯ ಬಜೆಟ್ ಜನಪರವೋ? ಜಾತಿಪರವೊ?’ ಎಂಬ ವಿಷಯದ ಕುರಿತು ನಗರದಲ್ಲಿ ಶನಿವಾರ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.
‘ಈ ಬಾರಿಯ ಬಜೆಟ್ ಅಹಿಂದ ವರ್ಗಗಳ ವಿರೋಧಿ ಬಜೆಟ್ ಆಗಿದೆ. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ನಿಗಮಗಳಿಗೆ ತಲಾ ₹500 ಕೋಟಿ ನೀಡಿದರೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ 16 ನಿಗಮಗಳಿಗೆ ₹500 ಕೋಟಿ ಅನುದಾನ ನೀಡಲಾಗಿದೆ. ಇದರಿಂದ ದಲಿತ ಸಮುದಾಯಕ್ಕೆ ದೊಡ್ಡ ಅನ್ಯಾಯವಾಗಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಅಂಬೇಡ್ಕರ್ ಹಾಗೂ ಬುದ್ಧ ಅಧ್ಯಯನ ಕೇಂದ್ರಕ್ಕೆ 70 ವರ್ಷಗಳಿಂದ ಯಾವುದೇ ಸರ್ಕಾರಗಳು ಅನುದಾನ ನೀಡಿಲ್ಲ. ಈ ಬಾರಿ ಅನುದಾನ ನೀಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸೂಲಗಿತ್ತಿ ನರಸಮ್ಮ ಸ್ಮಾರಕ ನಿರ್ಮಾಣಕ್ಕೆ ₹5 ಕೋಟಿ ಅನುದಾನ ಕೇಳಲಾಗಿತ್ತು. ಅದನ್ನೂ ನೀಡಿಲ್ಲ. ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ರಚಿಸಬೇಕು ಎಂಬ ಬೇಡಿಕೆ ಈಡೇರಿಲ್ಲ. ನೆಪಮಾತ್ರಕ್ಕೆ ಇದು ಸಮೃದ್ಧ ಕರ್ನಾಟಕ ಬಜೆಟ್’ ಎಂದರು.
‘ತಳ ಸಮುದಾಯಗಳ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದರು.
ನಿವೃತ್ತ ಐಎಎಸ್ ಅಧಿಕಾರಿ ಡಾ.ರಾಜು, ಚಿಂತಕ ಲೋಲಾಕ್ಷ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.