ಬೆಂಗಳೂರು: ಕಂದಾಯ ಭವನದಲ್ಲಿ ಹತ್ತಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ‘ಡಿಸಿ ಕ್ಯಾಂಟಿನ್’ಗೆ ಕಂದಾಯ ಇಲಾಖೆ ಅಧಿಕಾರಿಗಳು ಬುಧವಾರ ಬೀಗ ಹಾಕಿದರು.
ನಗರ ಜಿಲ್ಲಾಧಿಕಾರಿ ಜಗದೀಶ ಅವರ ಆದೇಶದ ಮೇರೆಗೆ ಉತ್ತರ ತಾಲ್ಲೂಕು ತಹಶೀಲ್ದಾರ್ ಮತ್ತು ಸಿಬ್ಬಂದಿ ಬುಧವಾರ ಮುಂಜಾನೆ ಕ್ಯಾಂಟಿನ್ ಮುಚ್ಚಿಸಿ, ಮೊಹರು ಹಾಕಿದರು. ಹೋಟೆಲ್ನಲ್ಲಿ ತಯಾರಿಸಲಾಗಿದ್ದ ಆಹಾರವನ್ನು ನೌಕರರು ತಮ್ಮ ಮಾಲೀಕರ ಸೂಚನೆ ಮೇರೆಗೆ ಅವರದೇ ಬೇರೆಡೆ ನಡೆಸುತ್ತಿರುವ ಕ್ಯಾಂಟಿನ್ಗೆ ಸಾಗಿಸಿದರು.
ಪರಿಷ್ಕೃತ ಬಾಡಿಗೆ ನೀಡುವ ಕುರಿತು ಬಾಡಿಗೆದಾರರು ಮತ್ತು ಜಿಲ್ಲಾಡಳಿತದ ನಡುವೆ ನಡೆದ ಮಾತುಕತೆ ಮುರಿದುಬಿದ್ದಿತ್ತು. ಕ್ಯಾಂಟಿನ್ ಗುತ್ತಿಗೆ ಅವಧಿ ಮುಗಿದಿದ್ದರಿಂದ, ಗುತ್ತಿಗೆದಾರರು ನವೀಕರಣ ಕುರಿತು ನಗರದ ಸಿಟಿ ಸಿವಿಲ್ ಕೋರ್ಟ್ ಮೊರೆ ಹೊಕ್ಕಿದ್ದರು. ನ್ಯಾಯಾಲಯ, ಜಿಲ್ಲಾಧಿಕಾರಿ ಕಚೇರಿ ಪರ ಆದೇಶ ಹೊರಡಿಸಿತ್ತು. ಅದರಂತೆ ಜಿಲ್ಲಾಡಳಿತ ಕ್ಯಾಂಟಿನ್ ಮಾಲೀಕರಿಗೆ ತೆರವುಗೊಳಿಸಲು ಸೂಚಿಸಿದ್ದರು.
‘ಈ ಹಿಂದೆ, ಸಿಟಿ ಸಿವಿಲ್ ಕೋರ್ಟ್ ಮತ್ತು ಕಂದಾಯ ಇಲಾಖೆ ಕಚೇರಿಗಳು ಒಂದೇ ಕಾಂಪೌಂಡ್ನಲ್ಲಿದ್ದವು. ಕೆಲಸದ ನಿಮಿತ್ತ ಈ ಕಚೇರಿಗಳಿಗೆ ಬಂದು ಹೋಗುವವರ ಹಸಿವು ನೀಗಿಸುವ ಮೂಲಕ ‘ಡಿಸಿ ಕ್ಯಾಂಟಿನ್’ ಹೆಸರುವಾಸಿಯಾಗಿತ್ತು. ಅಷ್ಟೇ ಅಲ್ಲದೆ ಪಕ್ಕದ ಜನರಲ್ ಹಾಸ್ಟೆಲ್ ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಕ್ಯಾಂಟಿನ್ ಕೂಡ ಆಗಿತ್ತು’ ಎಂದು ಕ್ಯಾಂಟಿನ್ಗೆ ಬೀಗ ಹಾಕಿರುವುದನ್ನು ಕಂಡು ಹಲವರು ಸ್ಮರಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.