ಬೆಂಗಳೂರು: ಆರ್.ಎಂ.ಸಿ ಯಾರ್ಡ್ ಠಾಣೆ ವ್ಯಾಪ್ತಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತೆಯೊಬ್ಬರ ಚಿನ್ನಾಭರಣ ಕಳವು ಮಾಡಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
‘ಆಂಧ್ರಹಳ್ಳಿ ನಿವಾಸಿ ನಾಗರತ್ನಮ್ಮ ಎಂಬುವರು ಸೆ. 26ರಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿದ್ದ ವಾರ್ಡ್ಗೆ ವೈದ್ಯರ ಸೋಗಿನಲ್ಲಿ ಬಂದಿದ್ದ ಅಪರಿಚಿತ, ಸ್ಕ್ಯಾನಿಂಗ್ ಮಾಡಿಸಬೇಕೆಂದು ಹೇಳಿ ಚಿನ್ನಾಭರಣ ಕದ್ದುಕೊಂಡು ಪರಾರಿಯಾಗಿ
ದ್ದಾನೆ. ಈ ಸಂಬಂಧ ಸೋಂಕಿತೆಯ ಪುತ್ರ ದೂರು ನೀಡಿದ್ದಾರೆ. ಆರೋಪಿ ಎನ್ನಲಾದ ಚೇತನ್ಗೌಡ ಅಲಿಯಾಸ್ ಮಂಜುನಾಥ್ ಎಂಬಾತನ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಸೆ. 27ರಂದು ತಡರಾತ್ರಿ 1.30ರ ಸುಮಾರಿಗೆ ಸೋಂಕಿತೆ ಬಳಿ ಬಂದಿದ್ದ ಆರೋಪಿ, ‘ನಿಮಗೆ ಸ್ಕ್ಯಾನಿಂಗ್ ಮಾಡಬೇಕಿದೆ. ಮೈ ಮೇಲೆ ಚಿನ್ನಾಭರಣ ತೆಗೆದು ನನಗೆ ಕೊಡಿ. ಸ್ಕ್ಯಾನಿಂಗ್ ಮುಗಿದ ನಂತರ ವಾಪಸು ಕೊಡುತ್ತೇನೆ’ ಎಂದಿದ್ದ. ನಂತರ 79 ಗ್ರಾಂ ಚಿನ್ನಾಭರಣ ಬಿಚ್ಚಿಸಿಕೊಂಡು ಪರಾರಿಯಾಗಿ
ದ್ದಾನೆ. ಮರುದಿನವಾದರೂ ಸ್ಕ್ಯಾನಿಂಗ್ ಮಾಡಿರಲಿಲ್ಲ’ ಎಂದೂ ಅವರು ತಿಳಿಸಿದರು.
‘ಆಸ್ಪತ್ರೆಯಲ್ಲಿ ಸ್ವಚ್ಛತಾ ಕೆಲಸ ಮಾಡಿಕೊಂಡಿರುವ ವ್ಯಕ್ತಿಯೇ ಕೃತ್ಯ ಎಸಗಿರುವ ಅನುಮಾನವಿದೆ. ಘಟನೆಯ ಬಳಿಕ ಆತ ತಲೆಮರೆಸಿಕೊಂಡಿ
ದ್ದಾನೆ’ ಎಂದೂ ಪೊಲೀಸರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.