ನೆಲಮಂಗಲ: ಪಟ್ಟಣದ ವಾಜರಹಳ್ಳಿ ರಸ್ತೆಯು ಸಂಪೂರ್ಣ ಹಾಳಾಗಿದ್ದು ವಾಹನ ಸವಾರರು, ಪಾದಚಾರಿಗಳು ಓಡಾಡುವುದೇ ಕಷ್ಟವಾಗಿದೆ.
ವಾಜರಹಳ್ಳಿ ರಸ್ತೆಯಲ್ಲಿರುವ ಚರಂಡಿಯ ಒಂದು ಭಾಗ ಹಲವು ವರ್ಷಗಳ ಹಿಂದೆ ಕುಸಿದಿದ್ದು, ಕುಸಿದಿರುವ ಭಾಗ ದಿನದಿಂದ ದಿನಕ್ಕೆ ಅಗಲವಾಗುತ್ತಲೇ ಇದೆ. ಎರಡು ವಾಹನಗಳು ಬಂದರೆ ಹರಸಾಹಸಪಟ್ಟು ಮುಂದಕ್ಕೆ ಹೋಗಬೇಕಾಗುತ್ತದೆ. ಚರಂಡಿಯ ಕೊರಕಲು ಕಾಣದಿದ್ದರೆ ಸೀದಾ ಚರಂಡಿಗೆ ವಾಹನ ಇಳಿಯುತ್ತದೆ.
‘ರಸ್ತೆಯು ಸಂಪೂರ್ಣ ಹಾಳಾಗಿದ್ದು, ದೊಡ್ಡ ಗುಂಡಿಗಳಿಂದ ತುಂಬಿದೆ. ಮಳೆ ಬಂದಾಗಲಂತು ರಸ್ತೆಯ ತುಂಬೆಲ್ಲ ನೀರು ನಿಂತಿರುತ್ತದೆ. ಎಲ್ಲಿ ಸಂಚರಿಸಬೇಕು ಎನ್ನುವುದೇ ತಿಳಿಯುವುದಿಲ್ಲ’ ಎಂದು ಸ್ಥಳೀಯರು ದೂರಿದರು.
‘ಹಲವು ವರ್ಷಗಳಿಂದ ಈ ರಸ್ತೆಯು ಹಾಳಾಗುತ್ತಾ ಇದೆ. ಚರಂಡಿ ಅಗಲವಾಗುತ್ತಿದೆ. ಜನಪ್ರತಿನಿಧಿಗಳು ದುರಸ್ತಿ ಕಾರ್ಯಕ್ಕೆ ಮುಂದಾಗಿಲ್ಲ. ಜೋರು ಮಳೆ ಬಂದರೆ ಶೇಷು ಬಡಾವಣೆಯ ತಿರುವಿನ ರಸ್ತೆಯಲ್ಲಿ ಒಂದು ಅಡಿಗೂ ಹೆಚ್ಚು ನೀರು ನಿಲ್ಲುತ್ತದೆ’ ಎಂದು ಉಪನ್ಯಾಸಕ ಸಂಜೀವಮೂರ್ತಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.