ಬೆಂಗಳೂರು: ‘ಮೊಬೈಲ್ ಆ್ಯಪ್ ಆಧರಿತ ಆಹಾರ ಪೂರೈಕೆ ಕಂಪನಿಗಳ ಡೆಲಿವರಿ ಬಾಯ್ಗಳು ಸಂಚಾರ ನಿಯಮ ಉಲ್ಲಂಘಿಸಿ ಅಪಘಾತವನ್ನುಂಟು ಮಾಡಿದರೆ ಆಡಳಿತ ಮಂಡಳಿಯೇ ಕಂಬಿ ಹಿಂದೆ ಇರಬೇಕಾಗುತ್ತದೆ’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
30 ನಿಮಿಷದಲ್ಲಿ ಆಹಾರ ಪೂರೈಕೆ ಮಾಡಬೇಕೆಂಬ ನಿಯಮವನ್ನು ಕಂಪನಿಗಳು ರೂಪಿಸಿವೆ. ಡೆಲಿವರಿ ಬಾಯ್ ಒಬ್ಬರು ಗಾಯಗೊಂಡು ಬಟ್ಟೆಗೆ ರಕ್ತ ಅಂಟಿಕೊಂಡಿದ್ದ ಸ್ಥಿತಿಯಲ್ಲೇ ಗ್ರಾಹಕ ಸಿ. ಸುಭಾಕರ್ ಅವರಿಗೆ ಆಹಾರ ಪೂರೈಕೆ ಮಾಡಿದ್ದರು. ಆ ಸಂಬಂಧ ಸುಭಾಕರ್ ಟ್ವೀಟ್ ಮಾಡಿದ್ದರು. ಅದಕ್ಕೆ ಹಲವರು ಪ್ರತಿಕ್ರಿಯಿಸಿದ್ದಾರೆ.
ಭಾಸ್ಕರ್ ರಾವ್, ‘30 ನಿಮಿಷದೊಳಗೆ ಗ್ರಾಹಕರಿಗೆ ಆಹಾರ ತಲುಪಿಸಲು ಡೆಲಿವರಿ ಬಾಯ್ಗಳು ಹರಸಾಹಸ ಪಡುತ್ತಿದ್ದಾರೆ. ಅದಕ್ಕಾಗಿ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಡೆಲಿವರಿ ಸಮಯವನ್ನು 30 ನಿಮಿಷದಿಂದ 40 ನಿಮಿಷಕ್ಕೆ ಏರಿಸಿ’ ಎಂದೂ ಕೋರಿದ್ದರು.
ಅದಕ್ಕೆ ಮರು ಟ್ವೀಟ್ ಮಾಡಿದ್ದಸ್ವಿಗ್ಗಿ ಕಂಪೆನಿ, ’ನಿಮ್ಮ ಕಾಳಜಿ ಅರ್ಥವಾಗುತ್ತದೆ. ಡೆಲಿವರಿ ಬಾಯ್ಗಳು ನಿಯಮ ಉಲ್ಲಂಘನೆ ಮಾಡಿದರೆ ನಮ್ಮ ಗಮನಕ್ಕೆ ತನ್ನಿ’ ಎಂದಿತ್ತು.
ಅದಕ್ಕೆ ತಿರುಗೇಟು ನೀಡಿರುವ ಭಾಸ್ಕರ್ ರಾವ್, ‘ನಿಮ್ಮ ಕಿರಿಕಿರಿಯಿಂದಲೇ ಹೆಚ್ಚಿನ ಸಂಖ್ಯೆ ಬಾಯ್ಗಳು ನಿಯಮ ಉಲ್ಲಂಘಿಸುತ್ತಿದ್ದಾರೆ. ಅವರಿಂದ ಅಪಘಾತವಾಗಿ ಏನಾದರೂ ಸಮಸ್ಯೆಯಾಗಬೇಕು, ಅವಾಗ ಸ್ವಿಗ್ಗಿ ಆಡಳಿತ ಮಂಡಳಿಯೇ ಕಂಬಿ ಹಿಂದೆ ಇರಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.