ಪೀಣ್ಯ ದಾಸರಹಳ್ಳಿ: ನಾಗಸಂದ್ರ ಮೆಟ್ರೊ ಸ್ಟೇಷನ್ ಪ್ರವೇಶ ದ್ವಾರದದ(ಮಂಜುನಾಥನಗರದ ಕಡೆ ಹೋಗುವ ದಾರಿ) ಪಕ್ಕದಲ್ಲಿನ ರಸ್ತೆ ಕುಸಿದು ಗುಂಡಿ ನಿರ್ಮಾಣವಾಗಿದೆ.
ಐದು ದಿನಗಳ ಹಿಂದೆ ಭಾರಿ ವಾಹನವೊಂದು ಈ ದಾರಿಯಲ್ಲಿ ಚಲಿಸಿದ ಮೇಲೆ ರಸ್ತೆ ಕುಸಿದಿದೆ. ಡಾಂಬರು ಸಹಿತ ಕುಸಿದಿದೆ. ಇವತ್ತಿನವರೆಗೂ ಅದನ್ನು ದುರಸ್ತಿ ಮಾಡಿಲ್ಲ. ಬದಲಿಗೆ, ಗುಂಡಿಯ ಸುತ್ತ, ಕಲ್ಲು ಇಟ್ಟು, ದಾರ ಕಟ್ಟಲಾಗಿದೆ. ಇದರಿಂದ ಮೆಟ್ರೊ ರೈಲು ನಿಲ್ದಾಣಕ್ಕೆ ಬಂದು ಹೋಗುವವರಿಗೆ ತುಂಬಾ ತೊಂದರೆಯಾಗುತ್ತಿದೆ.
’ನೀರಿನ ಸಂಪರ್ಕಕ್ಕಾಗಿ ಪೈಪ್ ಅಳವಡಿಸಲು ಈ ಭಾಗದಲ್ಲಿ ಗುಂಡಿ ತೆಗೆದಿದ್ದು, ಕಾಮಗಾರಿ ಮುಗಿದ ಮೇಲೆ ಸಮರ್ಪಕವಾಗಿ ಮುಚ್ಚಿ ರಸ್ತೆ ಮಾಡದ ಕಾರಣ, ಹೀಗೆ ಗುಂಡಿ ಬಿದ್ದಿದದೆ. ಬಿಡಬ್ಲ್ಯುಎಸ್ಎಸ್ಬಿ ಅಧಿಕಾರಿಗಳು ಗುಂಡಿ ಮುಚ್ಚದೇ ನಿರ್ಲಕ್ಷ್ಯವಹಿಸಿದ್ದಾರೆ’ ಎಂದು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.
‘ಜಲ ಮಂಡಳಿಯವರು ಪೈಪ್ ಒಡೆದಾಗ ಬಂದು ರಿಪೇರಿ ಮಾಡಿದರು. ನಂತರ ಹಾಗೆ ಬಿಟ್ಟು ಹೋಗಿದ್ದಾರೆ. ಮತ್ತೆ ಈ ಕಡೆ ತಲೆ ಹಾಕಿಲ್ಲ. ಇಲ್ಲಿ ಆಟೊ ನಿಲ್ಲಿಸಕ್ಕೂ ಜಾಗವಿಲ್ಲ. ಮೂರು ಅಡಿ ಆಳಗುಂಡಿ ಇದೆ. ದ್ವಿಚಕ್ರ ವಾಹನ ಸವಾರರು ಭಯದಿಂದ ವಾಹನ ಚಲಿಸುತ್ತಾರೆ. ಆದಷ್ಟು ಬೇಗ ದುರಸ್ತಿ ಮಾಡಬೇಕು’ ಎಂದು ಆಟೊ ಚಾಲಕ ಈರಣ್ಣ ಆಗ್ರಹಿಸಿದ್ದಾರೆ.
ಸರಿಪಡಿಸುತ್ತೇವೆ: ಜಲಮಂಡಳಿ
ಮೆಟ್ರೊ ನಿಲ್ದಾಣದ ಮುಂಭಾಗದಲ್ಲಿ ನೀರಿನ ಪೈಪ್ ಒಡೆದಿತ್ತು. ಅದನ್ನು ಸರಿಪಡಿಸಿದ್ದೇವೆ. ಪೈಪ್ ಅನ್ನು ಇನ್ನೊಂದು ಕಡೆಗೆ ನೇರ ಸಂಪರ್ಕ ಕಲ್ಪಿಸಬೇಕು. ಅದಕ್ಕಾಗಿ ಹಾಗೆ ಬಿಟ್ಟಿದ್ದೇವೆ. ಶೀಘ್ರವೇ ಗುಂಡಿಯನ್ನು ಮುಚ್ಚಿ ಸರಿಪಡಿಸುತ್ತೇವೆ’ ಎಂದು ಜಲಮಂಡಳಿ ಎಂಜಿನಿಯರ್ ನಾಗರಾಜ್ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.