ಬೆಂಗಳೂರು: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ನಮ್ಮ ಬೆಂಗಳೂರು ಫೌಂಡೇಷನ್, ಬೆಂಗಳೂರು ಸಂಚಾರ ಪೋಲೀಸ್, 56 ಸೆಕ್ಯೂರ್ ಮತ್ತು ಬೆಂಗಳೂರು ಟ್ರಾಫಿಕ್ ವಾರ್ಡನ್ ‘ಆರ್ಗ್’ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜ.17ರವರೆಗೆ ಸಪ್ತಾಹ ನಡೆಯಲಿದ್ದು, ರಸ್ತೆ ಶಿಸ್ತುಗಳನ್ನು ಅನುಸರಿಸಿದ್ದಕ್ಕಾಗಿ ಪ್ರಶಂಸೆದಾಯಕವಾಗಿ ರಸ್ತೆ ಬಳಕೆದಾರರಿಗೆ ಗುಲಾಬಿಗಳನ್ನು ನೀಡಲಾಯಿತು. ಕೆಎಫ್ಸಿ ಜಂಕ್ಷನ್ ಇಂದಿರಾನಗರ ಮತ್ತು ಸುತ್ತಮುತ್ತಲಿನ ಸಮುದಾಯದವರು ರಸ್ತೆಯಲ್ಲಿದ್ದಾಗ ತಮ್ಮನ್ನು ಮತ್ತು ಇತರರನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ಮಾಹಿತಿ ನೀಡಲಾಯಿತು.
ರಸ್ತೆ ಅಪಘಾತಗಳ ಕಾರಣ ಮತ್ತು ಅವುಗಳನ್ನು ತಡೆಗಟ್ಟುವ ಕ್ರಮಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಜಾಗೃತಿ ಅಭಿಯಾನ ಒಳಗೊಂಡಿದೆ. ಶಾಲಾ–ಕಾಲೇಜು ವಿದ್ಯಾರ್ಥಿಗಳು, ಚಾಲಕರು ಮತ್ತು ಎಲ್ಲಾ ಇತರ ರಸ್ತೆ ಬಳಕೆದಾರರೊಂದಿಗೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿದೆ ಎಂದು ನಮ್ಮ ಬೆಂಗಳೂರು ಫೌಂಡೇಷನ್ನ ಪ್ರಧಾನ ವ್ಯವಸ್ಥಾಪಕ ವಿನೋದ್ ಜೇಕಬ್ ಹೇಳಿದರು.
ವಾಹನ ಸವಾರರು ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸಿ ಸುರಕ್ಷಿತವಾಗಿ ವಾಹನ ಚಲಾಯಿಸುವುದರ ಬಗ್ಗೆ ಫಲಕಗಳನ್ನು ಪ್ರದರ್ಶಿಸಿ ರಸ್ತೆ ಸುರಕ್ಷತೆಯ ಬಗ್ಗೆ ತಿಳಿವಳಿಕೆ ನೀಡಲಾಯಿತು. ಸಂಚಾರ ನಿಯಮಗಳನ್ನು ಪಾಲಿಸಲು ಮತ್ತು ಸುರಕ್ಷತಾ ನಿಯಮಗಳನ್ನು ಅನುಸರಿಸಲು ನಾಗರಿಕರನ್ನು ಪ್ರೇರೇಪಿಸುವ ಸಲುವಾಗಿ ಈ ಅಭಿಯಾನವನ್ನು ನಗರದ ಪ್ರಮುಖ ಜಂಕ್ಷನ್ಗಳಲ್ಲಿ ಒಂದು ವಾರ ನಡೆಸಲಾಗುವುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.