ADVERTISEMENT

ಒತ್ತುವರಿ ತೆರವು: ಬೀದಿ ವ್ಯಾಪಾರಿಗಳ ಗೋಳಾಟ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2019, 20:08 IST
Last Updated 16 ಫೆಬ್ರುವರಿ 2019, 20:08 IST
ಚೆನ್ನಮ್ಮ ಅಜ್ಜಿ 
ಚೆನ್ನಮ್ಮ ಅಜ್ಜಿ    

ಬೆಂಗಳೂರು: ದೊಡ್ಡಬಳ್ಳಾಪುರ ಮತ್ತು ಕೊರಟಗೆರೆ ಮಾರ್ಗದಲ್ಲಿ ಬೀದಿ ಬದಿ ಹೂ, ಹಣ್ಣು ತರಕಾರಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದವರ ಮಳಿಗೆಗಳನ್ನು ಶನಿವಾರ ತೆರವು ಮಾಡಲಾಯಿತು.

ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ತೆರವು ಕಾರ್ಯಾಚರಣೆನಡೆಯಿತು.

ಏಕಾಏಕಿ ತೆರವುಗೊಳಿಸಲು ಬಂದ ಅಧಿಕಾರಿಗಳ ಕ್ರಮವನ್ನು ಖಂಡಿಸುತ್ತಲೇ, ಬೀದಿ ವ್ಯಾಪಾರಿಗಳು ತಮ್ಮ ಹೂ, ಹಣ್ಣು, ತರಕಾರಿಗಳನ್ನು ಎತ್ತಿಟ್ಟುಕೊಂಡರು.

ADVERTISEMENT

‘ಪಾದಚಾರಿ ರಸ್ತೆಯಲ್ಲಿ ಅಕ್ರಮವಾಗಿ ಅಂಗಡಿ ಇಟ್ಟುಕೊಂಡಿದ್ದರಿಂದ ಪಟ್ಟಣದ ರಸ್ತೆಗಳು ಕಿರಿದಾಗಿದ್ದು, ಸಂಚಾರ ದಟ್ಟಣೆ ಉಂಟಾಗಿ, ನಿತ್ಯ ಅಪಘಾತಗಳು ಸಂಭವಿಸುತ್ತಲೆ ಇವೆ. ಕ್ರಮಕೈಗೊಳ್ಳಿ ಎಂದು ಸಾರ್ವಜನಿಕರಿಂದ ಹಲವು ದೂರುಗಳು ಬಂದಿದ್ದವು. ಅಂಗಡಿಗಳನ್ನು ತೆರವುಗೊಳಿಸುವಂತೆ ನಾವು ವ್ಯಾಪಾರಿಗಳಿಗೆ ಹಲವು ಬಾರಿ ಹೇಳಿದ್ದರೂ ತೆರವುಗೊಳಿಸಿರಲಿಲ್ಲ. ಹಾಗಾಗಿ, ತಾಲ್ಲೂಕು ಆಡಳಿತದಿಂದ ತೆರವುಗೊಳಿಸುತ್ತಿದ್ದೇವೆ’ ಎಂದು ತಹಶೀಲ್ದಾರ‍ ರಾಜಶೇಖರ್‌ ಹೇಳಿದರು.

‘ರಾಷ್ಟ್ರೀಯ ಹೆದ್ದಾರಿ 209 ದೇವನಹಳ್ಳಿ ರಸ್ತೆ ವಿಸ್ತರಣೆ ಉದ್ದೇಶದಿಂದ ಹೆದ್ದಾರಿ ಪ್ರಾಧಿಕಾರ ಈಗಾಗಲೇ ಜಮೀನು ವಶಪಡಿಸಿಕೊಂಡು ಅದಕ್ಕೆ ಪರಿಹಾರವನ್ನು ನೀಡಿದೆ. ಸಂಬಂಧಿಸಿದವರು ಪರಿಹಾರವನ್ನು ಪಡೆದುಕೊಂಡಿದ್ದಾರೆ. ಆದರೆ, ಜಮೀನು ಬಿಡದೆ ಸತಾಯಿಸುತ್ತಿದ್ದಾರೆ. ಪ್ರಾಧಿಕಾರದಿಂದಲೂ ಜಮೀನು ತೆರವುಗೊಳಿಸಿಕೊಡುವಂತೆ ಮನವಿ ಬಂದ ಹಿನ್ನಲೆಯಲ್ಲಿ, ಪ್ರಾಧಿಕಾರಕ್ಕೆ ಸೇರುವ ಜಾಗದಲ್ಲಿನ ಮನೆ ಹಾಗೂ ಅಂಗಡಿಗಳನ್ನೂ ತೆರವುಗೊಳಿಸುತ್ತೇವೆ’ ಎಂದರು.

ನನ್ನ ದನಿ ಕೇಳಿಸಿಕೊಳ್ಳಲಿಲ್ಲ: ‘ಜೀವನೋಪಾಯಕ್ಕಾಗಿ ಹಣ್ಣಿನ ಅಂಗಡಿ ಇಟ್ಟುಕೊಂಡು ಜೀವನ ಮಾಡುತ್ತಿದ್ದೇನೆ. ಈಗ ಇದನ್ನೂ ಕೆಡವಿದರು. ಒಂದು ವಾರ ಸಮಯಾವಕಾಶ ಕೊಡಿ ಎಂದು ಅಧಿಕಾರಿಗಳನ್ನು ಕೇಳಿಕೊಂಡರೂ ಅವರಿಗೆ ನನ್ನ ದನಿ ಕೇಳಿಸಲಿಲ್ಲ. ಈಗ ನಾ ಎಲ್ಲಿಗೆ ಹೋಗಲಿ?’ ಎಂದು ಚೆನ್ನಮ್ಮ ಅಳಲು ತೋಡಿಕೊಂಡರು.

‘ಸರ್ಕಾರ ಕೊಟ್ಟಿರುವ ₹10 ಲಕ್ಷ ಪರಿಹಾರ ಧನ ಯಾವುದಕ್ಕೆ ಸಾಲುತ್ತೆ ಹೇಳಿ? ನನಗೆ ಇರೋದಕ್ಕೆ ನೆಲೆಯೂ ಇಲ್ಲ’ ಎಂದುಕಣ್ಣೀರು ಹಾಕಿದರು.

‘ಹತ್ತಾರು ವರ್ಷಗಳಿಂದ ಹೂ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದೇವೆ. ವ್ಯಾಪಾರಕ್ಕೆ ಬೇರೆಡೆ ಅವಕಾಶವನ್ನು ಮಾಡಿಕೊಡದೆ, ಯಾವುದೇ ಮುನ್ಸೂಚನೆ ನೀಡದೆ ಅಂಗಡಿ ಎತ್ತಂಗಡಿ ಮಾಡುತ್ತಿದ್ದಾರೆ’ ಎಂದರು ಅಂಗವಿಕಲೆ ಪಾರ್ವತಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.