ಬೆಂಗಳೂರು: ಚಿನ್ನಯ್ಯನಪಾಳ್ಯದಲ್ಲಿ ಉದ್ಯಮಿ ರಂಗನಾಥ್ ಎಂಬುವರನ್ನು ಚಾಕುವಿನಿಂದ ಇರಿದು ಮೊಬೈಲ್ ಸುಲಿಗೆ ಮಾಡಲಾಗಿದ್ದು, ಈ ಸಂಬಂಧ ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ವಿಲ್ಸನ್ಗಾರ್ಡನ್ ಸಮೀಪದ ಚಿನ್ನಯ್ಯನಪಾಳ್ಯ ನಿವಾಸಿಯಾದ ಉದ್ಯಮಿ ರಂಗನಾಥ್ ಗುಪ್ತಾ ಹಲ್ಲೆಗೊಳಗಾದವರು. ಅವರ ಪುತ್ರಿ ನೀಡಿರುವ ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಆಡುಗೋಡಿ ಪೊಲೀಸರು ತಿಳಿಸಿದರು.
‘ರಂಗನಾಥ್ ಗುಪ್ತಾ ಅವರು ಕೆಲಸ ನಿಮಿತ್ತ ಕೊಯಮತ್ತೂರಿಗೆ ತೆರಳಲು ನ. 24ರ ನಸುಕಿನ ಜಾವ 3 ಗಂಟೆಗೆ ಚಿನ್ನಯ್ಯನಪಾಳ್ಯದ ರಸ್ತೆಯಲ್ಲಿ ಸ್ನೇಹಿತರ ಕಾರಿಗಾಗಿ ಕಾಯುತ್ತಿದ್ದರು. ಅದೇ ವೇಳೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು, ರಂಗನಾಥ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.’
‘ಹಲ್ಲೆಯಿಂದಾಗಿ ರಂಗನಾಥ್ ಅವರ ಹೊಟ್ಟೆ, ಕೈ, ಕಾಲಿಗೆ ಗಾಯಗಳಾಗಿವೆ. ರಸ್ತೆಯಲ್ಲಿ ನರಳುತ್ತ ಬಿದ್ದಿದ್ದ ರಂಗನಾಥ್ ಅವರನ್ನು ಗಸ್ತಿನಲ್ಲಿದ್ದ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೃತ್ಯ ನಡೆದ ಸ್ಥಳದಲ್ಲಿನ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ’ ಎಂದೂ ಪೊಲೀಸರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.